ಸಿದ್ದಾಪುರ, ಮೇ ೧೦: ಇತಿಹಾಸ ಪ್ರಸಿದ್ಧ ಭಕ್ತರ ನಂಬಿಕೆಗೆ ಹೆಸರುವಾಸಿಯಾಗಿರುವ ಸಿದ್ದಾಪುರ ಸಮೀಪದ ಪಳ್ಳಕರೆ ಚಾರ್ಲೆಟ್‌ನಲ್ಲಿ ಚಾಮುಂಡೇಶ್ವರಿ ದೇವಿಯ ೭೨ನೇ ವರ್ಷದ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ, ವಿಜೃಂಭಣೆಯಿAದ ನೆರವೇರಿತು.

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಇಷ್ಟಾರ್ಥ ಹರಕೆಗಳನ್ನು ತೀರಿಸಿದರು. ದೇವಸ್ಥಾನ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಟಾಟಾ ಕಾಫಿ ಸಂಸ್ಥೆಯ ಅಸಿಸ್ಟೆಂಟ್ ಮ್ಯಾನೇಜರ್ ಭೀಮಯ್ಯ ಉದ್ಘಾಟಿಸಿ ಶುಭ ಹಾರೈಸಿದರು.

ಸಿದ್ದಾಪುರ ಭಾರತಿ ನೃತ್ಯ ಶಾಲೆ ಮಕ್ಕಳ ಭರತನಾಟ್ಯ ನೆರೆದಿದ್ದವರ ಗಮನ ಸೆಳೆಯಿತು. ಇದೇ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಭಕ್ತಾದಿಗಳಿಗೆ ತೀರ್ಥಪ್ರಸಾದ ಹಾಗೂ ಅನ್ನಸಂತರ್ಪಣೆ ಮಾಡಲಾಯಿತು. ಪದಾಧಿಕಾರಿಗಳಾದ ಶೇಖರ್, ಶಕ್ತಿವೇಲ್, ವೆಂಕಟೇಶ್, ಚೆಲುವರಾಜು, ಗಣಪತಿ, ಮಂಜು, ಪಾಂಡಿ, ಶಶಿ, ಶಿವಾನಂದ, ಸಿದ್ದಶೆಟ್ಟಿ, ಮೋಹನ, ಹಾಲಪ್ಪ ಸೇರಿದಂತೆ ಕಾರ್ಯಕರ್ತರು, ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಹಾಜರಿದ್ದರು.