ಪೊನ್ನಂಪೇಟೆ, ಮೇ ೧೪ : ಪೊನ್ನಂಪೇಟೆ ತಾಲೂಕಿನಲ್ಲಿ ಎರಡು ಹಸುಗಳು ಹುಲಿ ದಾಳಿಗೆ ಬಲಿಯಾಗಿವೆ. ತಾ.೧೩ ರಂದು ರಾತ್ರಿ ೧೨ ಗಂಟೆ ಸಮಯದಲ್ಲಿ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈಚೂರು ಕುಂದ ಗ್ರಾಮದ ತಾತೀರ ಎಸ್. ದೇವಯ್ಯ ಎಂಬವರ ಮನೆಯ ಮುಂದೆ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಅದೇ ಹುಲಿ ಸುಮಾರು ಎರಡು ಕಿ. ಮೀ. ದೂರದಲ್ಲಿರುವ ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗಣ ಗ್ರಾಮದ ಕಡೆಮಾಡ ಭೀಮಯ್ಯ ಎಂಬವರ ಹಸುವಿನ ಮೇಲೆ ಅದೇ ದಿನ ದಾಳಿ ನಡೆಸಿ ಕೊಂದು ಹಾಕಿದೆ.

ಹುಲಿದಾಳಿಯಿಂದ ಹಸು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವಂತೆ ಅಗ್ರಹಿಸಿದ್ದು, ಅರಣ್ಯ ಇಲಾಖೆ ಶೀಘ್ರವಾಗಿ ನಾಡಿಗೆ ಬಂದಿರುವ ಹುಲಿಯನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ. ಘಟನೆ ನಡೆದ ಸ್ಥಳಗಳಿಗೆ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಬಿ. ಎಂ. ಶಂಕರ್, ಉಪ ವಲಯ ಅರಣ್ಯಾಧಿಕಾರಿಗಳಾದ ದಿವಾಕರ್, ಸಚಿನ್ ಹಾಗೂ ಆರ್‌ಆರ್‌ಟಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. - ಚನ್ನನಾಯಕ