ನಾಪೋಕ್ಲು, ಮೇ ೧೩: ಜಿಲ್ಲೆಯ ವಿಶಿಷ್ಟ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಂದು ಜನಾಂಗದ ಪಾತ್ರ ಪ್ರಮುಖವಾದದು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ಸಮೀಪದ ಕಕ್ಕಬೆ ಪ್ರೌಢಶಾಲಾ ಆಟದ ಮೈದಾನದಲ್ಲಿ ಕೊಡಗು ಕಣಿಯ ವಿದ್ಯಾ ಅಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಣಿಯ ಜನಾಂಗದ ವಾರ್ಷಿಕ ಕ್ರೀಡಾಕೂಟದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದವಾದ ಇಲ್ಲಿ ಮೇದ ಜನಾಂಗದ ವಾರ್ಷಿಕ ಕ್ರೀಡಾಕೂಟ ಆಯೋಜಿಸಲ್ಪಟ್ಟಿದೆ, ಜೊತೆಗೆ ಕಣಿಯ ಜನಾಂಗದ ಕ್ರೀಡಾಕೂಟವನ್ನು ಆಯೋಜಿಸ ಲಾಗಿದೆ. ವಿವಿಧ ಸಮುದಾಯಗಳ ಸಂಖ್ಯೆ ಕಡಿಮೆ ಇದ್ದರೂ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಸಂಘಟನೆ ಆಗುವಂತದ್ದು ಹೆಮ್ಮೆಯ ವಿಷಯ. ಜಿಲ್ಲೆಯ ಪ್ರತಿಯೊಂದು ಜನಾಂಗವು ತನ್ನದೇ ಆದ ಆಚಾರ-ವಿಚಾರ ಪದ್ಧತಿ ಪರಂಪರೆಯನ್ನು ಹೊಂದಿದೆ. ಎಲ್ಲರೂ ಒಟ್ಟಾದರೆ ಮಾತ್ರ ಜಿಲ್ಲೆಯ ಸಂಸ್ಕೃತಿ, ಆಚಾರ ವಿಚಾರ ಬೆಳೆಯಲು ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಡಾ.ಮೇಚಿರ ಸುಭಾಷ್ ನಾಣಯ್ಯ, ಕೆಡಿಪಿ ಸದಸ್ಯ ಬಾಚಮಂಡ ಲವ ಚಿಣ್ಣಪ್ಪ, ಬುಡಕಟ್ಟು ಜನಾಂಗದ ಅಧ್ಯಕ್ಷ ಕುಡಿಯರ ಮುತ್ತಪ್ಪ, ಇನ್ನಿತರರು ಪಾಲ್ಗೊಂಡಿದ್ದರು .

ಕಣಿಯ ವಿದ್ಯಾ ಅಭಿವೃದ್ಧಿ ಸಂಘದ ಅಧ್ಯಕ್ಷ ಚೆಂದುವAಡ ದೇವಯ್ಯ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಸಂಘದ ಮಾಜಿ ಅಧ್ಯಕ್ಷ ಕಣಿಯರ ನಾಣಯ್ಯ ಉದ್ಘಾಟಿಸಿದರು.

ಈ ಸಂದರ್ಭ ಜನಾಂಗ ಬಾಂಧವರಿಗಾಗಿ ವಿವಿಧ ಕ್ರೀಡಾಕೂಟಗಳು ನಡೆದವು. ಮಕ್ಕಳು, ಮಹಿಳೆಯರು ಸೇರಿದಂತೆ ಕಣಿಯ ಜನಾಂಗದ ಹಲವು ಮಂದಿ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. -ವರದಿ: ದುಗ್ಗಳ