ಸೋಮವಾರಪೇಟೆ, ಮೇ ೧೪: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಡಾನೆ ಧಾಳಿ ನಡೆಸಿದ ಪರಿಣಾಮ ಕಾರ್ಮಿಕರೋರ್ವರು ಗಾಯಗೊಂಡು, ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸಮೀಪದ ಕೋವರ್‌ಕೊಲ್ಲಿ ಎಸ್ಟೇಟ್‌ನಲ್ಲಿ ನಡೆದಿದೆ.

ಕಾಫಿ ತೋಟದಲ್ಲಿ ೧೫ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭ ಒಂಟಿ ಸಲಗ ಹಠಾತ್ ಧಾಳಿ ನಡೆಸಿದ್ದು, ಈ ಸಂದರ್ಭ ಕಾರ್ಮಿಕ ಕೆ.ಬಿ.ಕುಮಾರ್ ಗಾಯಗೊಂಡಿದ್ದಾರೆ. ಏಕಾಏಕಿ ಎದುರಾದ ಕಾಡಾನೆ ಸೊಂಡಲಿನಿAದ ತಳ್ಳಿದ ಸಂದರ್ಭ ಕುಮಾರ್ ಅವರು ಅನತಿ ದೂರಕ್ಕೆ ಬಿದ್ದ ಪರಿಣಾಮ ಸೊಂಟ, ಕಾಲಿಗೆ ಪೆಟ್ಟಾಗಿದೆ. ಗಾಯಾಳು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅರಣ್ಯ ಇಲಾಖೆ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕಾರ್ಮಿಕ ಮುಖಂಡ ಎಚ್.ಎಂ.ಸೋಮಪ್ಪ ಎಚ್ಚರಿಸಿದ್ದಾರೆ. ಆರ್‌ಎಫ್‌ಒ ಚೇತನ್ ಗಾಯಾಳುವನ್ನು ಭೇಟಿ ಮಾಡಿ ಮುಂದಿನ ಕ್ರಮಕೈಗೊಂಡಿದ್ದಾರೆ.