ಸೋಮವಾರಪೇಟೆ, ಮೇ ೧೪: ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿದ್ದ ಅಸ್ಸಾಂ ಮೂಲದ ಮಹಿಳೆ ಯೋರ್ವರು, ಅಂತಿಮ ಹಂತದಲ್ಲಿ ರಕ್ತದೊತ್ತಡ ಅಧಿಕವಾಗಿ ಮಡಿಕೇರಿಗೆ ಸಾಗಿಸುವ ಮಾರ್ಗ ಮಧ್ಯೆ ೧೦೮ ಆಂಬ್ಯುಲೆನ್ಸ್ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಮೂಲತಃ ಅಸ್ಸಾಂ ನಿವಾಸಿ, ಪಟ್ಟಣ ಸಮೀಪದ ಬಳಗುಂದ ಎಸ್ಟೇಟ್‌ನಲ್ಲಿ ನೆಲೆಸಿರುವ ಶಹಜಾನ್ ಎಂಬವರ ಪತ್ನಿ ೩೭ ವರ್ಷದ ಹಿರಾದನ್ ಎಂಬ ಮಹಿಳೆ ನಾಲ್ಕನೇ ಹೆರಿಗೆಗಾಗಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಇಂದು ಬೆಳಿಗ್ಗೆ ರಕ್ತದೊತ್ತಡ ಅಧಿಕಗೊಂಡ ಹಿನ್ನೆಲೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲು ೧೦೮ ಆಂಬ್ಯುಲೆನ್ಸ್ನಲ್ಲಿ ಕರೆದೊಯ್ಯಲಾಗುತ್ತಿತ್ತು. ಈ ನಡುವೆ ಮಾರ್ಗಮಧ್ಯೆಯ ಗರಗಂದೂರಿನಲ್ಲಿ ಹೆರಿಗೆ ನೋವು ತೀವ್ರಗೊಂಡಿದ್ದು, ಸ್ಟಾಫ್ ನರ್ಸ್ ಹೇಮಂತ್‌ಕುಮಾರ್ ಅವರು, ಚಾಲಕ ಪ್ರಸನ್ನ ಅವರ ಸಹಾಯದೊಂದಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ.

ನಂತರ ನವಜಾತ ಹೆಣ್ಣು ಮಗು ಹಾಗೂ ಬಾಣಂತಿಯನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಿ, ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ.