ಪೊನ್ನಂಪೇಟೆ, ಮೇ ೧೬: ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಅರಣ್ಯ ವಲಯ ವ್ಯಾಪ್ತಿಯ ಪೂಜೆಕಲ್ಲು ಗ್ರಾಮದ ಪುಷ್ಪಕುಮಾರಿ ಎಂಬ ಮಹಿಳೆಯ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ತಾ.೧೪ ರಂದು ನಡೆದಿದೆ.

ಬೆಳಗ್ಗಿನ ಜಾವ ಮಹಿಳೆ ಮನೆಯಿಂದ ಹೊರಗೆ ಬಂದ ಸಂದರ್ಭ ಮನೆಯ ಸಮೀಪವೇ ಇದ್ದ ಕರಡಿ ದಾಳಿ ನಡೆಸಿದೆ. ದಾಳಿಯ ರಭಸಕ್ಕೆ ಮಹಿಳೆ ಕೆಳಗೆ ಬಿದ್ದಾಗ, ಕರಡಿ ಆಕೆಯ ಮೇಲೆರಗಿದ್ದು, ಮಹಿಳೆಯ ಕಾಲು ಹಾಗೂ ಮಂಡಿಯ ಭಾಗಕ್ಕೆ ಗಾಯಗಳಾಗಿವೆ.

ಘಟನೆ ನಡೆದ ಸ್ಥಳಕ್ಕೆ ಆರ್ ಎಫ್ ಓ ನವೀನ್ ಮತ್ತು ಫಾರೆಸ್ಟ್ ಗಾರ್ಡ್ ಸುನಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕರಡಿ ದಾಳಿಯಿಂದ ಗಾಯಗೊಂಡ ಮಹಿಳೆಯನ್ನು ಕುಟ್ಟ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಶ್ರೀಮಂಗಲ ಅರಣ್ಯ ವಲಯ ಆರ್.ಎಫ್.ಓ ಅರವಿಂದ್ ಮಾಹಿತಿ ನೀಡಿದ್ದಾರೆ. ಇಲಾಖೆ ವತಿಯಿಂದ ಮಹಿಳೆಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.