ಸಿದ್ದಾಪುರ, ಮೇ ೧೬: ಹತ್ತನೇ ವರ್ಷದ ಹಾಕತ್ತೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟೀಂ ೯೯ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಉಳುವಾರನ ದಿವಂಗತ ಎನ್ ಪಳಂಗಪ್ಪ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿ ಮತ್ತು ಹೊನಲು ಬೆಳಕಿನ ಹಗ್ಗಜಗ್ಗಾಟ ಸ್ಪರ್ಧೆಯು ಹಾಕತ್ತೂರಿನ ಸರಕಾರಿ ಶಾಲಾ ಮೈದಾನದಲ್ಲಿ ನಡೆಯಿತು.

ಹತ್ತು ತಂಡಗಳು ಭಾಗವಹಿಸಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಅನಿಲ್ ಮಾಲೀಕತ್ವದ ಟೀಂ ೯೯ ತಂಡ ಮೊದಲನೇ ಸ್ಥಾನ ಪಡೆದುಕೊಂಡರೆ ಪ್ರಸಾದ್ ಮಾಲೀಕತ್ವದ ತುಶಾಂತ್ ಫ್ರೆಂಡ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿತು. ಹಸೈನಾರ್ ಮಾಲೀಕತ್ವದ ಕುಟ್ಟಿ ವಾರಿಯಾರ್ಸ್ ಮೂರನೇ ಬಹುಮಾನ ಹಾಗೂ ಕಾದರ್ ಮಾಲೀಕತ್ವದ ಟೀಮ್ ಜಿಜಿಟಿ ನಾಲ್ಕನೇ ಬಹುಮಾನ ಪಡೆದುಕೊಂಡಿತು. ಹಗ್ಗಜಗ್ಗಾಟದಲ್ಲಿ ಅನಿಲ್ ಮಾಲೀಕತ್ವದ ತಂಡ ಪ್ರಥಮ ಸ್ಥಾನ ಹಾಗೂ ಅಬೂಬಕ್ಕರ್ ಮಾಲೀಕತ್ವದ ತಂಡ ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡಿತು.

ಸಮಾರೋಪ ಸಮಾರಂಭದಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರನ್ನು ಕ್ರೀಡಾಕೂಟದ ಆಯೋಜಕರು ಸನ್ಮಾನಿಸಿ ಗೌರವಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ತೇಜಸ್ ನಾಣಯ್ಯ, ಲಕ್ಷ್ಮಣ, ಮಣಿಕಂಠ, ಕುಂಜ್ಞಿ ಅಬ್ದುಲ್ಲಾ, ಪಿಯೂಶ್ ಪೆರೇರಾ, ರಾಮಪ್ಪ, ಉಮ್ಮರ್ ಹಾಗೂ ಹಾಕತ್ತೂರು ಗ್ರಾಮದ ಆರು ಮಂದಿ ಆಶಾ ಕಾರ್ಯಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಕ್ರೀಡಾ ಸಮಿತಿಯ ಪ್ರಮುಖರಾದ ಅಲ್ತಾಫ್, ಅನಿಲ್, ಪ್ರಸಾದ್, ಅಲಿ, ಮನೋಜ್, ಪ್ರಸಾದ್ ಸೇರಿದಂತೆ ಮತ್ತಿತರರು ಇದ್ದರು.