ಸೋಮವಾರಪೇಟೆ, ಮೇ ೧೬: ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಹೊಸತೋಟದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಇನ್ನೋವಾ ಕಾರು, ಎಡಭಾಗದ ಗುಂಡಿಗೆ ಮಗುಚಿಕೊಂಡಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ ಪ್ರಯಾಣಿಕÀರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುಶಾಲನಗರದಿಂದ ಬಾಡಿಗೆಗೆ ಪಡೆದುಕೊಂಡು ಸೋಮವಾರಪೇಟೆಯಿಂದ ಮಡಿಕೇರಿಗೆ ತೆರಳುತ್ತಿದ್ದ ಕಾಗಡಿಕಟ್ಟೆಯ ಸೂರ್ಯ ಎಂಬಾತ ಚಲಾಯಿಸುತ್ತಿದ್ದ ಕಾರು ಹೊಸತೋಟದ ತಿರುವಿನಲ್ಲಿ ನಿಯಂತ್ರಣ ತಪ್ಪಿ ಎಡಬದಿಯ ಗುಂಡಿಗೆ ಮಗುಚಿದೆ. ಪರಿಣಾಮ ಸನಿಹದಲ್ಲಿಯೇ ಇದ್ದ ಖತೀಜ ಎಂಬವರ ಮನೆ ಜಖಂಗೊAಡು, ಕಾರಿನ ಮುಂಭಾಗ ಹಾನಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.

ಹೊಸತೋಟದ ತಿರುವಿನಲ್ಲಿ ಆಗಾಗ್ಗೆ ಇಂತಹ ಅವಘಡಗಳು ಸಂಭವಿಸುತ್ತಿದ್ದು, ಲೋಕೋಪಯೋಗಿ ಇಲಾಖೆ ಇತ್ತ ಗಮನ ಹರಿಸಿ ರಸ್ತೆ ಬದಿಗೆ ಕ್ರಾಸ್ ಬ್ಯಾರಿಯರ್ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಹರದೂರು ಗ್ರಾ.ಪಂ. ಸದಸ್ಯ ಸಲೀಂ ಹೊಸತೋಟ ಆಗ್ರಹಿಸಿದ್ದಾರೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಭಿಯಂತರ ವೆಂಕಟೇಶ್ ನಾಯಕ್ ಅವರ ಗಮನ ಸೆಳೆಯಲಾಗಿದ್ದು, ಸ್ಥಳ ಪರಿಶೀಲನೆ ನಡೆಸಿ ಕ್ರಾಸ್ ಬ್ಯಾರಿಯರ್ ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ‘ಶಕ್ತಿ’ಯೊಂದಿಗೆ ಭರವಸೆ ನೀಡಿದ್ದಾರೆ.