ಮಡಿಕೇರಿ, ಮೇ ೧೭: ನಗರದ ಮಹದೇವಪೇಟೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಶ್ರೀ ಚೌಡೇಶ್ವರಿ ದೇವಿಯ ಪ್ರತಿಷ್ಠಾಪನÀ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಮೊದಲು ದೇವಿಗೆ ಅಭಿಷೇಕ ನಡೆಸಿ ಪೂಜೆ ಸಲ್ಲಿಸಿ ದೇವಾಲಯ ದಿಂದ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಶ್ರೀ ಬಸವೇಶ್ವರ ಹಾಗೂ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯಕ್ಕೆ ಕೊಂಡೊಯ್ದು ಪೂಜೆಯನ್ನು ಸಲ್ಲಿಸಿದ ನಂತರ ಕಟ್ಟೆಪೂಜೆಯನ್ನು ಮಾಡಿ ತಂಬಿಟ್ಟು ಆರತಿಯೊಂದಿಗೆ ದೇವಾಲಯಕ್ಕೆ ಬಂದು ತೂಗೂಯ್ಯಾಲೆ ಪೂಜೆ ಯೊಂದಿಗೆ ಮಹಾಪೂಜೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ನೇಕಾರ ಆದ್ಯವಚನಕಾರ ದೇವರ ದಾಸಿಮಯ್ಯ ಜಯಂತೋತ್ಸವವನ್ನು ಸಭಾಂಗಣದಲ್ಲಿ ಆಚರಿಸಲಾಯಿತು.

ತಾಲೂಕು ನೇಕಾರ ಸಂಘದ ಅಧ್ಯಕ್ಷ ಡಿ.ಡಿ. ರಮೇಶ್ ದೇವರ ದಾಸಿಮಯ್ಯ ಅವರ ಜೀವನದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಡಿ.ವಿ. ಜಗದೀಶ್, ಮಡಿಕೇರಿ ದೇವಾಂಗ ಸಂಘದ ಅಧ್ಯಕ್ಷ ಕೆ.ಎನ್. ಗಜಾನನ ಹಾಗೂ ಪದಾಧಿಕಾರಿಗಳು, ದೇವಾಂಗ ಮಹಿಳಾ ಸಮಾಜದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಜರಿದ್ದರು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಸಲಾಯಿತು. ಸಂಜೆ ಮಹಿಳಾ ಸಮಾಜದ ಸದಸ್ಯರಿಂದ ಲಲಿತಾ ಸಹಸ್ರನಾಮ ಪಾರಾಯಣ ನಡೆಯಿತು.