ನಾಪೋಕ್ಲು, ಮೇ ೧೭: ಪ್ರತಿಯೊಬ್ಬ ಗುರು ತನ್ನ ನೋವನ್ನು ಮರೆತು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯನ್ನು ಬಯಸುತ್ತಿರುತ್ತಾರೆ. ಅಂತಹ ಗುರುಗಳನ್ನು ವಂದಿಸಿ ಅಭಿನಂದಿಸಿದಾಗ ವಿದ್ಯಾರ್ಥಿಯ ಜೀವನ ಸಾರ್ಥಕವಾಗುತ್ತದೆ ಎಂದು ಮೈಸೂರಿನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪಟ್ಟಡ ಶಿವಕುಮಾರ್ ಅಭಿಪ್ರಾಯ ಪಟ್ಟರು.

ಮದೆನಾಡು ಗ್ರಾಮದ ಬೆಳಕುಮಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸುವರ್ಣ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಎಷ್ಟು ಎತ್ತರಕ್ಕೆ ಏರುತಾನೋ ಅಷ್ಟೇ ವಿಧೇಯರಾಗಿ ಗುರುಗಳ ಮುಂದೆ ನಡೆದುಕೊಳ್ಳಬೇಕು. ಗುರುಗಳ ಮಾರ್ಗದರ್ಶನದಿಂದ ಜೀವನದಲ್ಲಿ ಎದುರಾಗುವ ಯಾವುದೇ ಸೋಲುಗಳನ್ನು ಹಿಮ್ಮಟಿಸಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಶಾಲೆಯ ಸ್ಥಾಪಕ ಶಿಕ್ಷಕಿ ಗೌರಮ್ಮ ಸಮಾರಂಭವನ್ನು ಉದ್ಘಾಟಿಸಿ ತಮ್ಮ ಐವತ್ತು ವರ್ಷಗಳ ಹಿಂದಿನ ಸೇವೆಯನ್ನು ಮೆಲುಕು ಹಾಕಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮದೆಮಹೇಶ್ವರ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ.ಆರ್. ಜೋಯಪ್ಪ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾದ ಮೇಲೆ ಕ್ರಮೇಣ ಜನರು ಬಡತನದಿಂದ ಹೊರಬಂದು ಜೀವನ ರೂಪಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.

ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಎನ್.ಎಸ್ ಪ್ರವೀಣ್, ರಾಘವೇಂದ್ರ, ಪತ್ರಕರ್ತ ಕೆ.ಎಲ್. ಗಿರೀಶ್ ವಿದ್ಯಾರ್ಥಿ ಜೀವನವನ್ನು ಸ್ಮರಿಸಿದರು.

ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಬೈನೆರವನ ಇಂದ್ರಕುಮಾರ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಈ ಸಂದರ್ಭ ನಿವೃತ್ತ ಮುಖ್ಯ ಶಿಕ್ಷಕ ಎನ್.ಟಿ. ಸೋಮಯ್ಯ, ಮದೆ ಮಹೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎಂ.ಎಸ್ ಶಿವರಾವ್, ಬಿಆರ್‌ಸಿ ಮಂಜುಳಾ ಚಿತ್ರಾಪುರ, ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಬಿ.ಎಂ. ಪ್ರಮೀಳಾ, ಧನಂಜಯ ಅಗೋಳಿಕಜೆ, ಕ್ಯಾಪ್ಟನ್ ಹುಲಿಮನೆ ಹರೀಶ್ ಕುಮಾರ್ ಅತಿಥಿಗಳಾಗಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲಾಕ್ಷಿ, ಶಾಲೆಯ ಮುಖ್ಯ ಶಿಕ್ಷಕಿ ಭಾಗ್ಯಲಕ್ಷಿö್ಮ, ಎಸ್‌ಡಿಎಂಸಿ ಅಧ್ಯಕ್ಷ ರಾಧಾಕೃಷ್ಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೈನೆರವನ ಯಶೋದಿನಿ, ಸದಸ್ಯರಾದ ರಾಮಯ್ಯ, ಸಜನ್, ಶಾಲಾ ಸಂಸ್ಥಾಪಕರ ಪುತ್ರ ಪಿ.ಆರ್. ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಕಳೆದ ೫೦ ವರ್ಷಗಳಲ್ಲಿ ಸೇವೆ ಸಲ್ಲಿಸಿದ ಸುಮಾರು ಮೂವತ್ತಕ್ಕೂ ಅಧಿಕ ಗುರುಗಳನ್ನು ವಂದಿಸಿ ಸನ್ಮಾನಿಸಲಾಯಿತು.

ಮದೆ ಮಹೇಶ್ವರ ಪ್ರೌಢಶಾಲೆಯ ಶಿಕ್ಷಕರಾದ ದಿ. ತೊತ್ತಿಯನ ಮಂದಣ್ಣ, ಬಿ.ಆರ್. ಜೋಯಪ್ಪ, ಎಂ.ಎಸ್. ಶಿವರಾಮ್ ಅವರನ್ನು ಸನ್ಮಾನಿಸಲಾಯಿತು.

ನಾಡಿನ ಬೇರೆ ಬೇರೆ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಾಲೆಯ ಹಳೆ ವಿದ್ಯಾರ್ಥಿಗಳಾದ ಪಟ್ಟಡ ಶಿವಕುಮಾರ್, ಡಾ. ಪ್ರವೀಣ್ ಎನ್.ಎಸ್., ಡಾ. ರಾಘವೇಂದ್ರ, ಗಿರೀಶ್ ಕೆ.ಎಲ್., ಪ್ರಮೀಳಾ ಬಿ.ಎಂ., ಧನಂಜಯ ಅಗೋಳಿಕಜೆ, ಕ್ಯಾಪ್ಟನ್ ಹುಲಿಮನೆ ಡಿ. ಹರೀಶ್ ಕುಮಾರ್, ಕಿರಿಯ ಪ್ರತಿಭೆಗಳಾದ ರಾಷ್ಟçಮಟ್ಟದ ಥ್ರೋಬಾಲ್ ಆಟಗಾರ್ತಿ ಅನುಶ್ರೀ ಬಿ.ಎಸ್., ಯೋಗಪಟು ಸಿಂಚನ ಕೀರ್ತಿ ಕುಮಾರ್ ಅವರನ್ನು ಗೌರವಿಸಲಾಯಿತು.

ಇದಕ್ಕೂ ಮೊದಲು ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಮದೆ ಮಾಧುರಪ್ಪ ದೇವಾಲಯದ ಆವರಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲಾಕ್ಷಿ ಚಾಲನೆ ನೀಡಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು.

ಸುವರ್ಣ ಮಹೋತ್ಸವ ಸಮಿತಿಯ ಪದಾಧಿಕಾರಿಗಳಾದ ಸುರೇಶ್, ತಾರಾನಾಥ್ ಬಿ.ಎಸ್., ಪುಂಡರಿಕ ಎಂ.ಎಲ್., ಕೃಷ್ಣಪ್ಪ ಬಿ.ಜೆ. ಇನ್ನಿತರರು ಪಾಲ್ಗೊಂಡಿದ್ದರು.