ಸೋಮವಾರಪೇಟೆ, ಮೇ ೧೭: ಕಳೆದ ೩ ವರ್ಷಗಳಿಂದ ಸೋಮವಾರಪೇಟೆ ನ್ಯಾಯಾಲಯದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದು, ಇದೀಗ ಬೆಂಗಳೂರಿಗೆ ವರ್ಗಾವಣೆಗೊಂಡ ಕೆ. ಗೋಕುಲ್ ಅವರನ್ನು ಸೋಮವಾರಪೇಟೆ ವಕೀಲರ ಸಂಘದ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು. ನ್ಯಾಯಾಲಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶರಾದ ಕೆ. ಗೋಪಾಲಕೃಷ್ಣ, ವಕೀಲರ ಸಂಘದ ಅಧ್ಯಕ್ಷ ಕಾಟ್ನಮನೆ ವಿಠಲ್ ಗೌಡ ಸೇರಿದಂತೆ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.

ಈ ಸಂದರ್ಭ ಮಾತನಾಡಿದ ಕೆ. ಗೋಕುಲ್ ಅವರು, ಕಳೆದ ೩ ವರ್ಷಗಳಿಂದ ಸೋಮವಾರಪೇಟೆಯಲ್ಲಿ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ. ಕೊಡಗು ಜಿಲ್ಲೆ ಸುಂದರ ಪ್ರಾಕೃತಿಕ ಸಂಪತ್ತನ್ನು ಹೊಂದಿದ್ದು, ಉತ್ತಮ ವಾತಾವರಣವಿದೆ. ಸೇವೆ ಸಂದರ್ಭ ವಕೀಲರಿಂದಲೂ ಉತ್ತಮ ಸಹಕಾರ ದೊರೆತಿದೆ ಎಂದು ಸ್ಮರಿಸಿದರು.

ಈ ಸಂದರ್ಭ ಉಪಾಧ್ಯಕ್ಷೆ ಪವಿತ್ರ, ಕಾರ್ಯದರ್ಶಿ ಕೃಷ್ಣಕುಮಾರ್, ಎಪಿಪಿಗಳಾದ ವೈಶಾಲಿ, ಪ್ರಶಾಂತ್, ಹಿರಿಯ ವಕೀಲರಾದ ಎಂ.ಬಿ. ಅಭಿಮನ್ಯುಕುಮಾರ್, ಈಶ್ವರಚಂದ್ರ ಸಾಗರ್ ಸೇರಿದಂತೆ ವಕೀಲರುಗಳು ಪಾಲ್ಗೊಂಡಿದ್ದರು.