ಸುಂಟಿಕೊಪ್ಪ, ಮೇ ೨೦: ಸಮೀಪದ ಶಾಂತಿಗೇರಿ, ಅಂದಗೋವೆ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಸೇರಿಕೊಂಡು ಕಾಫಿ, ಬಾಳೆ, ಮಾವಿನ ಗಿಡಗಳನ್ನು ನಾಶಪಡಿಸಿ ಆತಂಕಕ್ಕೆ ಕಾರಣವಾಗಿರುವ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ಅರಣ್ಯ ಇಲಾಖೆಯಿಂದ ನಡೆಯಿತು. ಮೊದಲಿಗೆ ಶಾಂತಿಗೇರಿ ತೋಟದಿಂದ ಒಟ್ಟು ಏಳು ಕಾಡಾನೆಗಳನ್ನು ಓಡಿಸಿ ಕೊಂಡು ಹೋಗಲಾಯಿತು. ಅಂದಗೋವೆಯ ದೇವರ ಕಾಡಿನೊಳಗೆ ನುಸುಳಿಕೊಂಡ ಕಾಡಾನೆಗಳನ್ನು ಕಲ್ಲೂರು ಮೂಲಕ ಆನೆಕಾಡು ಅಡವಿಗೆ ಅಟ್ಟಲಾಯಿತು.