ಸಿದ್ದಾಪುರ, ಮೇ ೨೨: ರೇಡಿಯೋ ಕಾಲರ್ ಅಳವಡಿಸಿದ ಕಾಡಾನೆಯೊಂದು ಮನೆಯ ಸಮೀಪವೇ ಬಂದು ಕಾರು ಬೈಕುಗಳಿಗೆ ಜಖಂಗೊಳಿಸಿ ಸ್ಥಳೀಯರಲ್ಲಿ ಆತಂಕ ಸೃಷ್ಟಿ ಮಾಡಿದ ಘಟನೆ ಬಾಡಗ ಬಾಣಂಗಾಲ ಮಠ ಗ್ರಾಮದಲ್ಲಿ ನಡೆದಿದೆ.

ಮಠ ಗ್ರಾಮದ ಹೇಮಂತ್, ಶ್ರೀಧರ್ ಹಾಗೂ ಚಲ್ಲಪ್ಪ ಎಂಬವರಿಗೆ ಸೇರಿದ ಕಾರು, ಬೈಕ್‌ಗಳಿಗೆ ಕಾಡಾನೆ ಹಾನಿಪಡಿಸಿದೆ.

ಮನೆಯ ಬಳಿ ನಿಲ್ಲಿಸಲಾಗಿದ್ದ ಮೂರು ವಾಹನಗಳ ಮೇಲೆ ದಾಳಿ ಮಾಡಿದ ಕಾಡಾನೆ ಮನೆಯ ಸಮೀಪದ ಸುತ್ತಮುತ್ತಲಿನ ಭಾಗದ ಬಾಳೆ, ಕಾಫಿ, ಅಡಿಕೆ ಗಿಡಗಳನ್ನು ತುಳಿದು ನಾಶಪಡಿಸಿದೆ.

ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು ಕಾರ್ಮಿಕರು ತೋಟ ಕೆಲಸಕ್ಕೆ ತೆರಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು.