ಸೋಮವಾರಪೇಟೆ, ಮೇ ೨೨: ಗೌಡಳ್ಳಿ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡುಕೋಣಗಳ ಉಪಟಳ ಜಾಸ್ತಿಯಾಗಿದ್ದು ಕೃಷಿಕರು ಕಂಗಾಲಾಗಿದ್ದಾರೆ.

ನಿಡ್ತ, ಮಾಲಂಬಿ, ಯಡವನಾಡು ಮೀಸಲು ಅರಣ್ಯಗಳಿಂದ ಕಾಡುಕೋಣಗಳು ಬೆಳಗ್ಗಿನ ಜಾವ ಕಾಫಿ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಅರಣ್ಯದಂಚಿನ ಗ್ರಾಮಗಳಲ್ಲಿ ಕೂಲಿ ಕಾರ್ಮಿಕರು ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕೃಷಿಕರು ಭಯಪಡುತ್ತಿದ್ದಾರೆ. ಬುಧವಾರ ಬೆಳಿಗ್ಗೆ ಹಿರಿಕರ, ಹೆಗ್ಗುಳ ಮತ್ತು ಚಿಕ್ಕಾರ ಗ್ರಾಮಗಳ ತೋಟಗಳಲ್ಲಿ ಕಾಡುಕೋಣಗಳು ಹಾವಳಿ ಮಾಡಿರುವ ಬಗ್ಗೆ ಗ್ರಾಮಸ್ಥರು ತಿಳಿಸಿದ್ದಾರೆ. ಕಾಫಿ ತೋಟದೊಳಗೆ ಬೆಳಗ್ಗಿನ ಜಾವ ಆಹಾರ ಸೇವಿಸಿ,ಗುದ್ದಾಟ ನಡೆಸಿರುವುದರಿಂದ ಕಾಫಿಗಿಡಗಳು ಹಾಳಾಗಿವೆ. ಎಚ್.ಪಿ.ಸುರೇಶ್, ರಾಜಪ್ಪ, ಜಿ.ಕೆ.ಸುರೇಶ್ ಎಂಬವರುಗಳ ಕಾಫಿ ತೋಟಗಳಲ್ಲಿ ಗಿಡಗಳು ಹಾಳಾಗಿವೆ.

ಕಾಡಾನೆಗಳÀ ಕಾಟ ಕಡಿಮೆಯಾದಂತೆ ಕಾಡುಕೋಣಗಳ ಹಾವಳಿ ಪ್ರಾರಂಭವಾಗಿದೆ. ಬೆಳಗ್ಗಿನ ಜಾವ ಕಾಫಿ ತೋಟಗಳಿಗೆ ಕಾಲ್ನಡಿಗೆಯಲ್ಲಿ ತೆರಳಲು ಭಯವಾಗುತ್ತದೆ. ಹಗಲಿನ ವೇಳೆ ಕೆಲಸಕ್ಕೆ ಕೂಲಿ ಕಾರ್ಮಿಕರು ಬರುತ್ತಿಲ್ಲ. ಅರಣ್ಯ ಇಲಾಖೆ ಕಾಡುಕೋಣಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಕಾಫಿ ಬೆಳೆಗಾರ ಎಚ್.ಪಿ.ತ್ರಿಲೋಕ್ ಒತ್ತಾಯಿಸಿದ್ದಾರೆ.