ಪಾಲಿಬೆಟ್ಟ, ಮೇ ೨೩: ಕಾಫಿ ತೋಟದ ಒಂಟಿ ಮನೆಗಳನ್ನು ಗುರುತಿಸಿಕೊಂಡು ಕಾರ್ಡ್ ಸ್ಕಾçಚ್ ಮಾಡಿದರೆ ವಿಶೇಷ ಬಹುಮಾನ ಇದೆ ಎಂದು ನಂಬಿಸಿ ವಂಚನೆ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಬೆಳೆಗಾರರೊಬ್ಬರು ಪೊಲೀಸರಿಗೆ ಒಪ್ಪಿಸಿದ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಎಂಬವರ ಮನೆಗೆ ಅಪರಿಚಿತ ವ್ಯಕ್ತಿ ಬೈಕ್‌ವೊಂದರಲ್ಲಿ ಬಂದು ಗ್ಯಾಸ್ ಸ್ಟವ್ ಸೇರಿದಂತೆ ಎಲೆಕ್ಟಾçನಿಕ್ ಉಪಕರಣಗಳನ್ನು ವಿಶೇಷ ಬಹುಮಾನದ ಮೂಲಕ ನೀಡುವುದಾಗಿ ನಂಬಿಸಿದ್ದಾನೆ.

ಮೊದಲಿಗೆ ೨೦೦ ರೂಪಾಯಿ ನೀಡಿ ಆಫರ್ ಕಾರ್ಡ್ ಒಂದನ್ನು ಸ್ಕಾçಚ್ ಮಾಡಿದರೆ ಎಲೆಕ್ಟಾçನಿಕ್ ಬಹುಮಾನ ಸಿಗಲಿದೆ ಎಂದು ನಂಬಿಸಿದ್ದಾನೆ. ಆತನ ವರ್ತನೆಯ ಬಗ್ಗೆ ಸಂಶಯಿಸಿ, ವಿಚಾರಣೆ ಸಂದರ್ಭ ಆತ ಹೆಸರು ಬದಲಿಸಿ ವೀರಾಜಪೇಟೆ ಮೂಲದವನು ಎಂದು ಹೇಳಿದ್ದಾನೆ.

ಆಧಾರ್ ಕಾರ್ಡ್ ಸೇರಿದಂತೆ ದಾಖಲಾತಿ ಕೇಳುವ ಸಂದರ್ಭದಲ್ಲಿ ಯಾವುದೂ ಇವನ ಬಳಿ ಇರಲಿಲ್ಲ. ತಕ್ಷಣ ಸುಬ್ರಮಣಿ ಅವರು ಸಿದ್ದಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಠಾಣೆಯಲ್ಲಿ ಆತನನ್ನು ವಿಚಾರಣೆಗೊಳಪಡಿಸಿದ್ದ ಸಂದರ್ಭ ಮೂಲತಃ ಯುಪಿ ರಾಜ್ಯದವನಾಗಿದ್ದು, ಎಲೆಕ್ಟಾçನಿಕ್ ವಸ್ತುಗಳನ್ನು ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ್ದಾನೆ.

ನಂತರ ಆತನೊಂದಿಗೆ ಬಂದಿದ್ದ ಮತ್ತೊಬ್ಬ ವ್ಯಕ್ತಿ ಠಾಣೆಗೆ ಬಂದು ಅಗತ್ಯ ದಾಖಲಾತಿಗಳನ್ನು ನೀಡಿದ್ದಾನೆ. ಶಿರಸಿ ಮೂಲದ ಬೈಕ್‌ನಲ್ಲಿ ಬಂದು ವ್ಯಾಪಾರ ಮಾಡುತ್ತಿದ್ದ ಎನ್ನಲಾಗಿದೆ.

ಬೈಕಿನ ಕೆಲವೊಂದು ದಾಖಲಾತಿಗಳು ಇಲ್ಲದ ಕಾರಣ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ದಂಡ ವಿಧಿಸಿ ಕಳುಹಿಸಿದ್ದಾರೆ.

ಮೂಕೊಂಡ ವಿಜು ಸುಬ್ರಮಣಿ ಮಾತನಾಡಿ, ಜಿಲ್ಲೆಯ ನಾನಾ ಭಾಗಗಳಲ್ಲಿ ಒಂಟಿ ಮನೆಗಳನ್ನು ಗುರುತಿಸಿ ಆಸೆ, ಅಮಿಷಗಳನ್ನು ಒಡ್ಡಿ ದರೋಡೆ ಸೇರಿದಂತೆ ಹಲವು ಘಟನೆಗಳು ಜಿಲ್ಲೆಯಲ್ಲಿ ನಡೆದಿವೆ. ವರ್ಷಗಳ ಹಿಂದೆ ಪಾಲಿಬೆಟ್ಟದಲ್ಲೂ ದರೋಡೆ ಪ್ರಕರಣ ನಡೆದಿದೆ.

ಸಾರ್ವಜನಿಕರು ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಆಗಮಿಸುವವರ ಬಗ್ಗೆ ನಿಗಾ ವಹಿಸಬೇಕೆಂದು ಮನವಿ ಮಾಡಿದ್ದಾರೆ.

ವರದಿ -ಪುತ್ತಂ ಪ್ರದೀಪ್