ಗೋಣಿಕೊಪ್ಪಲು, ಮೇ ೨೪: ವಿಪರೀತ ಮಳೆಯ ನಡುವೆ ಸಿಡಿಲಿನ ರಭಸಕ್ಕೆ ವಾಸದ ಮನೆ ಜಖಂಗೊAಡಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಗರೆ ಎಂಬಲ್ಲಿ ನಡೆದಿದೆ.

ತಾ. ೨೨ ರ ರಾತ್ರಿ ೮.೩೦ ರ ಸುಮಾರಿಗೆ ಸುರಿದ ಮಳೆಯ ನಡುವೆ ಸಿಡಿಲು ವೇಳೆ ಈ ದುರಂತ ಸಂಭವಿಸಿದೆ. ಗ್ರಾಮದ ವೇಣು ಅಪ್ಪಣ್ಣನವರಿಗೆ ಸೇರಿದ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯವರೆಲ್ಲರೂ ರಾತ್ರಿಯ ಊಟ ಮಾಡುತ್ತಿದ್ದ ವೇಳೆ ಸಂಭವಿಸಿದೆ.

ಸಿಡಿಲಿನ ರಭಸಕ್ಕೆ ಮನೆಯ ಗೋಡೆಗಳು ಸೇರಿದಂತೆ ವಿದ್ಯುತ್ ಮೀಟರ್ ಹಾಗೂ ಮನೆಗೆ ಅಳವಡಿಸಿರುವ ವಯರ್‌ಗಳು ಸುಟ್ಟು ಕರಕಲಾಗಿವೆ.

ಈ ಭಾಗದಲ್ಲಿ ರಾತ್ರಿಯ ವೇಳೆ ೪ ಇಂಚು ಮಳೆ ಸುರಿದಿದೆ. ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ಮೊದಲ ಮಳೆಗೆ ಅನಾಹುತ ಸಂಭವಿಸಿದೆ.