ಗೋಣಿಕೊಪ್ಪಲು, ಮೇ ೨೪ : ಕಾಫಿ ತೋಟದಲ್ಲಿ ಕಬ್ಬಿಣದ ಏಣಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ತೋಟದ ಕಾರ್ಮಿಕ ಮೃತಪಟ್ಟಿರುವ ಘಟನೆ ಬಾಳಲೆ ಹೋಬಳಿಯ ವಡ್ಡರಮಾಡು ಬಳಿಯ ನಿಡುಗುಂಬ ಗ್ರಾಮದಲ್ಲಿ ನಡೆದಿದೆ.

ಮೂಲತಃ ಹೆಚ್.ಡಿ.ಕೋಟೆ ತಾಲೂಕಿನ ನಿವಾಸಿ ಸಿದ್ಧ (೪೯) ಮೃತ ಕಾರ್ಮಿಕ. ಪ್ರಶಾಂತ್ ಎಂಬವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಿದ್ದ, ಪಪ್ಪಾಯ ಹಣ್ಣು ಕೊಯ್ದು ಏಣಿಯನ್ನು ಬೇರೆಡೆಗೆ ಸಾಗಿಸುತ್ತಿದ್ದಾಗ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತದೇಹವನ್ನು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.