ಮಡಿಕೇರಿ, ಮೇ.೨೭: ಮನೆಗೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ತನಿಖೆ ವೇಳೆ ದೇವಾಲಯದಲ್ಲಿ ನಡೆದ ಕಳ್ಳತನದ ಸತ್ಯಾಂಶವೂ ಹೊರಬಿದ್ದಿದೆ. ಶನಿವಾರಸಂತೆ ಠಾಣಾ ವ್ಯಾಪ್ತಿಯ ಸುಳುಗಳಲೆ ನಿವಾಸಿ ಜೀವನ್ (೨೫) ಬಂಧಿತ ಆರೋಪಿ. ತಾ. ೨೪ ರಂದು ಸುಳುಗಳಲೆ ಗ್ರಾಮದ ಬಿ.ಕೆ. ಸುಂದರ್೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅವರ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಮನೆಗೆ ನುಗ್ಗಿದ್ದು, ಬೀರುವಿನ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನವಾಗಿತ್ತು. ಸುಂದರ್ ಅವರ ಮಗಳು ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಶನಿವಾರಸಂತೆ ಠಾಣೆಯಲ್ಲಿ ಅಂದಾಜು ೫೧.೫ ಗ್ರಾಂ ತೂಕ ಚಿನ್ನಾಭರಣ ಕಳ್ಳತನವಾಗಿದೆ ಎಂಬ ದೂರಿನಡಿ ಪ್ರಕರಣ ದಾಖಲಾಗಿತ್ತು.

ಆರೋಪಿ ಪತ್ತೆಗೆ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ, ಪೊಲೀಸ್ ಇನ್ಸ್ಪೆಕ್ಟರ್ ಡಿ. ಪ್ರೀತಂ, ಉಪನಿರೀಕ್ಷಕ ಕೆ.ಆರ್. ರವಿಶಂಕರ್, ಗೋವಿಂದರಾಜು ಹಾಗೂ ಸಿಬ್ಬಂದಿ ತಂಡ ತನಿಖೆ ಕೈಗೆತ್ತಿಕೊಂಡಿತ್ತು. ತಾ. ೨೭ ರಂದು ಆರೋಪಿಯನ್ನು ಬಂಧಿಸಿದ ತನಿಖಾ ತಂಡ ನ್ಯಾಯಾಲಯಕ್ಕೆ ಹಾಜರುಪಡಿಸಿ ಆತನಿಂದ ೪೩ ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದೆ. ವಿಚಾರಣೆ ವೇಳೆ ಫೆ. ೧೧ ರಂದು ಶನಿವಾರಸಂತೆ ತ್ಯಾಗರಾಜ ಕಾಲೋನಿಯ ಶ್ರೀ ವಿಜಯ ವಿನಾಯಕ ದೇವಾಲಯದ ಕಚೇರಿ ಬೀಗ ಒಡೆದು ಕಾಣಿಕೆ ಡಬ್ಬಿಯನ್ನು ಕಳವು ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.