ಮುಳ್ಳೂರು, ಮೇ ೨೮ : ಖಾಸಗಿ ಬಸ್ಸು ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಮಧ್ಯಾಹ್ನ ಗುಡುಗಳಲೆ ಬಳಿ ಸಂಭವಿಸಿದೆ. ಶನಿವಾರಸಂತೆ ಗುಂಡೂರಾವ್ ಬಡಾವಣೆ ನಿವಾಸಿ ರಜಾಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿ. ರಜಾಕ್ ಸೋಮವಾರಪೇಟೆಯಿಂದ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ತನಗೆ ಸೇರಿದ ಕಾರಿನಲ್ಲಿ ಮನೆಗೆ ಬರುತ್ತಿದ್ದ ವೇಳೆಯಲ್ಲಿ ಶನಿವಾರಸಂತೆಯಿAದ ಸೋಮವಾರಪೇಟೆಗೆ ಹೋಗುತ್ತಿದ್ದ ಖಾಸಗಿ ಬಸ್ಸಿಗೆ ಗುಡುಗಳಲೆ ಕಾರು ಚಾಲಕನ ನಿಯಂತ್ರಣ ತಪ್ಪಿ ಬಸ್ಸಿನ ಮುಂಭಾಗಕ್ಕೆ ಅಪ್ಪಳಿಸಿದೆ. ಕಾರು ಬಸ್ಸಿನ ಮುಂಭಾಗದೊಳಗೆ ತೂರಿ ಹೋಗಿದೆ. ಕಾರು ಚಾಲಕ ರಜಾಕ್‌ಗೆ ತಲೆ, ಎದೆಭಾಗಕ್ಕೆ ಗಂಭೀರವಾಗಿ ಗಾಯವಾಗಿದ್ದು, ಚಿಂತಾಜನಕದಲ್ಲಿರುವ ರಜಾಕ್‌ನನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕಾರು ಮುಂಭಾಗದಲ್ಲಿ ಕುಳಿತಿದ್ದ ರಜಾಕ್ ಪತ್ನಿಗೆ ಗಾಯವಾಗಿದ್ದು ಅವರು ಕೂಡ ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂಭಾಗದಲ್ಲಿ ಕುಳಿತಿದ್ದ ರಜಾಕ್ ಮಕ್ಕಳಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶನಿವಾರಸಂತೆ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.