ಸೋಮವಾರಪೇಟೆ, ಮೇ ೨೮: ಸಾಲಬಾಧೆಯಿಂದ ನೇಣುಬಿಗಿದುಕೊಂಡು ಯುವ ಉದ್ಯಮಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣ ಸಮೀಪದ ತಾಕೇರಿ ಗ್ರಾಮದಲ್ಲಿ ನಡೆದಿದೆ.

ತಾಕೇರಿ ಗ್ರಾಮದ ಮಲ್ಲಾಜೀರ ಗಣಪತಿ ಅವರ ಪುತ್ರ ಸತೀಶ್ (೪೪) ಎಂಬವರೇ ಆತ್ಮಹತ್ಯೆಗೆ ಶರಣಾದವರು.

ನಿನ್ನೆ ಸಂಜೆ ೪ ಗಂಟೆಯವರೆಗೂ ಪಟ್ಟಣದಲ್ಲಿದ್ದ ಸತೀಶ್, ನಂತರ ತಾಕೇರಿ ಗ್ರಾಮದ ಮನೆಗೆ ತೆರಳಿ, ಅಲ್ಲಿಂದ ಜೀಪ್‌ನಲ್ಲಿ ಸುಮಾರು ೨ ಕಿ.ಮೀ. ದೂರವಿರುವ ತೋಟಕ್ಕೆ ಹೋಗಿದ್ದಾರೆ. ಈ ಸಂದರ್ಭ ಪತ್ನಿಯೂ ಹಿಂಬಾಲಿಸಿದ್ದು, ಅವರು ಸ್ಥಳಕ್ಕೆ ತೆರಳುವಷ್ಟರಲ್ಲಿ ಸತೀಶ್ ಅವರು ತೋಟದಲ್ಲಿದ್ದ ಮರಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಯ ದೃಶ್ಯವನ್ನು ಕಂಡ ಪತ್ನಿ ಸ್ವೀಟಿ ಅವರು ಜೋರಾಗಿ ಕಿರುಚಿಕೊಂಡಿದ್ದು, ಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದವರು ಆಗಮಿಸಿ ಕೆಳಗಿಳಿಸುವ ಪ್ರಯತ್ನ ಮಾಡುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಪಟ್ಟಣದ ರಾಜ್ ಮಹಲ್ ವಾಣಿಜ್ಯ ಸಂಕೀರ್ಣದಲ್ಲಿ ಎವರ್ ಗ್ರೀನ್ ಆಗ್ರೋ ಫಾರ್ಮರ್ಸ್ ಹೆಸರಿನ ಅಂಗಡಿಯಿಟ್ಟುಕೊAಡಿದ್ದ ಸತೀಶ್ ಅವರು ಹೆಚ್ಚು ಸಾಲ ಮಾಡಿಕೊಂಡಿದ್ದು, ಇದರಿಂದಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ಸಿಬ್ಬಂದಿಗಳು ತೆರಳಿ ಮಹಜರು ನಡೆಸಿದ ನಂತರ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಲಾಯಿತು. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಮೃತ ಸತೀಶ್ ಅವರು ಪೋಷಕರೊಂದಿಗೆ ಪತ್ನಿ ಸೇರಿದಂತೆ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.