ಸಂದರ್ಶನ : ಟಿ ಹೆಚ್.ಜೆ. ರಾಕೇಶ್

ಮಡಿಕೇರಿ, ಮೇ ೨೯ : ಒಂದು ವರ್ಷದ ಅಧಿಕಾರದ ಅವಧಿಯಲ್ಲಿ ನೂರಾರು ಸವಾಲುಗಳು ಎದುರಾಗಿವೆ. ಈ ನಡುವೆಯೂ ‘ಅಭಿವೃದ್ಧಿಯೇ ಅಜೆಂಡಾ’ ಎಂಬ ಆಧಾರದಲ್ಲಿ ಹೆಜ್ಜೆಯಿಟ್ಟ ಖುಷಿ ತನಗಿದೆ. ಮುಂದಿನ ೪ ವರ್ಷಗಳಲ್ಲಿ ಮತ್ತಷ್ಟು ಕೆಲಸದ ಗುರಿ ಹೊಂದಿದ್ದೇನೆ. ರಾಜ್ಯಕ್ಕೆ ಮಾದರಿ ಕ್ಷೇತ್ರವನ್ನಾಗಿ ರೂಪಿಸುವತ್ತ ಯೋಜನೆಗಳಿವೆ ಎಂದು ಶಾಸಕ ಡಾ. ಮಂತರ್ ಗೌಡ ತಮ್ಮ ಯೋಚನೆ-ಯೋಜನೆಗಳ ಕುರಿತು ‘ಶಕ್ತಿ’ಯೊಂದಿಗೆ ಮನಬಿಚ್ಚಿ ಮಾತನಾಡಿದರು.

ರಾಜಕೀಯ ಹಿನ್ನೆಲೆಯ ಕುಟುಂಬದಿAದ ಬಂದರೂ ಪ್ರಾಯೋಗಿಕವಾಗಿ ರಾಜಕೀಯ ಹೇಗೆ ಮಾಡಬೇಕೆಂಬ? ಅನುಭವದ ಕೊರತೆ ಇತ್ತು. ಹಾಸನ ಜಿಲ್ಲೆಯ ರಾಮನಾಥಪುರ ಕ್ಷೇತ್ರದಿಂದ ಜಿ.ಪಂ. ಸದಸ್ಯನಾಗಿ ಮಾಡಿದ ಕೆಲಸ ಒಂದು ಹಂತವಾದರೆ, ಒಂದು ವಿಧಾನಸಭಾ ಕ್ಷೇತ್ರವನ್ನು ನಿರ್ವಹಣೆ ಮಾಡಬೇಕಾದ ಮಹತ್ತರ ಜವಾಬ್ದಾರಿ ಪಡೆದ ನಂತರ ಎಲ್ಲವನ್ನೂ ಕಲಿಯುತ್ತಾ ಹೋದೆ, ಕಲಿಯುತ್ತಲೇ ಇದ್ದೇನೆ. ವಿಧಾನ ಪರಿಷತ್ತು ಚುನಾವಣೆಯಲ್ಲಿ ಸೋತರೂ ದೊಡ್ಡಮಟ್ಟದ ಮತವನ್ನು ಸೆಳೆದ ತೃಪ್ತಿ ಇತ್ತು. ಇದೇ ಕಾರಣಕ್ಕೆ ವರಿಷ್ಠರು ವಿಧಾನಸಭೆಯಲ್ಲಿ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿದರು. ಜನ ನನ್ನನ್ನು ನಂಬಿ ಗೆಲ್ಲಿಸಿದ್ದಾರೆ. ಅವರ ನಿರೀಕ್ಷೆಗೆ ತಕ್ಕ ಕೆಲಸ ಮಾಡಲು ಕಟಿಬದ್ಧನಾಗಿದ್ದೇನೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಟಾನಕ್ಕೆ ಭಾರಿ ಮೊತ್ತ ಮೀಸಲಿಡಬೇಕು, ಕೊಡಗಿನ ಅಭಿವೃದ್ಧಿಗೆ ವೇಗ ನೀಡಲು ಸಾಕಷ್ಟು ಅನುದಾನದ ಅವಶ್ಯಕತೆ ಇತ್ತು, ಜೊತೆಗೆ ವೈಜ್ಞಾನಿಕ ಕಾರ್ಯಯೋಜನೆ ರೂಪಿಸುವುದು.. ಹೀಗೆ ಅನೇಕ ಕಾರಣಗಳು ತನಗೆ ಸವಾಲೊಡ್ಡಿದವು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಸಚಿವರುಗಳನ್ನು ಗಮನ ಸೆಳೆದ ಫಲವಾಗಿ ಅಲ್ಪಾವಧಿಯಲ್ಲಿ ಸುಮಾರು ರೂ. ೩೦೦ ಕೋಟಿಯಷ್ಟು ಅನುದಾನ ಜಿಲ್ಲೆಗೆ ತರುವಂತಾಯಿತು. ಹದಗೆಟ್ಟ ರಸೆ ದುರಸ್ತ್ತಿ, ವೈದ್ಯಕೀಯ ಕ್ಷೇತ್ರದಲ್ಲಿ ಪರಿವರ್ತನೆ, ಮೈದಾನಗಳ ಅಭಿವೃದ್ಧಿ, ಗ್ರಾಮೀಣ ಭಾಗಗಳ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಈ ಹಂತದಲ್ಲಾಗಿದೆ. ಮುಂದಿನ ದಿನಗಳಲ್ಲಿ ಹಲವು ವರ್ಷಗಳಿಂದ ಬಗೆಹರಿಯದೆ ಉಳಿದಿರುವ ಜ್ವಲಂತ ಸಮಸ್ಯೆಗಳ ಪರಿಹಾರ ಹಾಗೂ ಕೊಡಗಿನ ಹಿತಕಾಯುವ ನಿಟ್ಟಿನಲ್ಲಿ ಕಾನೂನು ರೂಪಿಸುವತ್ತ ಚಿಂತನೆ ಹರಿಸಿ ಕಾರ್ಯೋನ್ಮುಖಗೊಳ್ಳಲಿದ್ದೇನೆ ಎಂದು ಚಿಂತನೆಯ ಬಗ್ಗೆ ವಿವರಿಸಿದರು.

ಹಲವರ ಬಾಳು ಬೆಳಗಿದ ‘ಗ್ಯಾರಂಟಿ’

ಚುನಾವಣಾ ಪೂರ್ವದ ಭರವಸೆಯಿಂದ ಪಂಚ ಗ್ಯಾರಂಟಿಯನ್ನು ಅನುಷ್ಟಾನ ಮಾಡುವ ಮೂಲಕ ಹಲವರ ಬಾಳನ್ನು ಸರಕಾರ ಬೆಳಗಿದೆ. ಅದೇ ರೀತಿ ಕೊಡಗಿನಲ್ಲಿಯೂ ಗ್ಯಾರಂಟಿ ಯೋಜನೆಗಳು ಬಹುತೇಕ ಫಲಾನುಭವಿಗಳಿಗೆ ತಲುಪುವಲ್ಲಿ ಯಶಸ್ವಿಯಾಗಿದೆ.

ಅದರಲ್ಲೂ ಗೃಹಜ್ಯೋತಿ, ಗೃಹಲಕ್ಷಿö್ಮ, ಶಕ್ತಿ, ಅನ್ನಭಾಗ್ಯ ಪರಿಣಾಮಕಾರಿಯಾಗಿ ತಲುಪಿದೆ. ವಿದ್ಯಾಸಿರಿಯೂ ಹಲವು ವಿದ್ಯಾವಂತ ನಿರುದ್ಯೋಗಿಗಳಿಗೆ ಪ್ರಯೋಜನವಾಗಿದೆ. ಯೋಜನೆ ತಲುಪದವರಿಗೆ ತಲುಪಿಸುವ ಕೆಲಸವನ್ನು ಮಾಡಲಾಗುವುದು. ಉಚಿತ ಯೋಜನೆ ಎಂದು ಬೊಬ್ಬೆ ಹಾಕಿದವರೂ, ಇದೀಗ ಯೋಜನೆ ಲಾಭ ಪಡೆದು ಸಾಮಾಜಿಕ

(ಮೊದಲ ಪುಟದಿಂದ) ಪ್ರಗತಿ ಸಾಧಿಸಿದ ಉದಾಹರಣೆಗಳಿವೆ ಎಂದು ಯೋಜನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಜಿಲ್ಲೆಯಲ್ಲಿ ವನ್ಯಜೀವಿ-ಮಾನವ ಸಂಘರ್ಷ ಎಲ್ಲೆಮೀರಿದೆ. ಕಾಡಾನೆ ಸೇರಿದಂತೆ ಇತರೆ ವನ್ಯಜೀವಿಗಳ ಆಟಾಟೋಪಕ್ಕೆ ತೋಟಗಳು ನಾಶವಾಗುತ್ತಿವೆ. ಈ ಸಂದಿಗ್ಧತೆಯನ್ನು ಅರಿತು ಇದಕ್ಕೆ ವೈಜ್ಞಾನಿಕ ಪರಿಹಾರದ ಅಗತ್ಯತೆ ಇದೆ. ಈಗಾಗಲೇ ಆನೆ ಕಾರಿಡಾರ್, ಕಂದಕ, ಸೋಲಾರ್ ಬೇಲಿ, ಬ್ಯಾರಿಕೇಡ್ ಯೋಜನೆ ಅನುಷ್ಟಾನಗೊಂಡಿದೆ. ಹೀಗಿದ್ದರೂ ಆನೆಗಳು ನಾಡಿನತ್ತ ಲಗ್ಗೆಯಿಡಲು ಕಾರಣ ಏನು ಎಂಬುದರ ಕುರಿತು ಚರ್ಚೆಗಳ ಅವಶ್ಯಕತೆ ಹೆಚ್ಚಿದೆ. ಈ ಬಗ್ಗೆಯೂ ಮುತುವರ್ಜಿ ವಹಿಸಲಾಗುವುದು ಎಂದು ಮಂತರ್ ಆಶಾಭಾವನೆ ವ್ಯಕ್ತಪಡಿಸಿದರು.

ಸಾಮಾಜಿಕ ಬದಲಾವಣೆ ತರುವ ಪ್ರಯತ್ನ

ಕ್ಷೇತ್ರದ ಅಭಿವೃದ್ಧಿಯೊಂದಿಗೆ ಅಶಕ್ತರು, ಬಡವರು, ಶೋಷಿತರು, ಆದಿವಾಸಿಗಳು, ಕಾರ್ಮಿಕರು ಹೀಗೆ ಸಮಾಜದ ಮುಖ್ಯವಾಹಿನಿಗೆ ಬಾರದವರಲ್ಲಿ ಸಾಮಾಜಿಕ ಬದಲಾವಣೆ ತರಲು ಮುನ್ನುಡಿ ಇಟ್ಟಿದ್ದೇನೆ.

ಎಲ್ಲಾ ವರ್ಗದವರು ಸಾಮಾಜಿಕವಾಗಿ ಮುನ್ನಲೆಗೆ ಬರಬೇಕು. ವೈಯಕ್ತಿಕ ಪ್ರಗತಿಯಿಂದ ಸಮಾಜದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯವಿದೆ. ಹಾಡಿ, ಕಾಲೋನಿಗಳ ಅಭಿವೃದ್ಧಿಯಾಗಬೇಕು. ಇಂದಿಗೂ ಅದೆಷ್ಟೋ ಕುಟುಂಬಗಳು ಕತ್ತಲಲ್ಲಿ ಬದುಕುತ್ತಿವೆ. ಅವರ ಬದುಕು ಹಸನು ಮಾಡಬೇಕು. ಮೂಲಭೂತ ಸೌಕರ್ಯ ಒದಗಿಸಿ ಅವರುಗಳನ್ನು ಮೇಲೆತ್ತುವ ಕೆಲಸ ಮಾಡಬೇಕು. ಹಕ್ಕುಪತ್ರ ಒದಗಿಸುವ ಕೆಲಸವಾಗುತ್ತಿದೆ. ಅದೇ ರೀತಿ ಶ್ರೀಸಾಮಾನ್ಯನ ಬದುಕಿಗೆ ಆಧಾರವಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಚುನಾವಣೆ ಸಮಯದಲ್ಲಿ ಮಾತ್ರ ರಾಜಕಾರಣ ನಂತರ ದಿನಗಳಲ್ಲಿ ತಾನು ಜನಸೇವಕನಾಗಿರುವೆ. ಪಕ್ಷ, ಜಾತಿ, ಮತ, ಧರ್ಮದ ಹಂಗಿಲ್ಲ ಎಂದು ಹೇಳಿದರು.

ಶಾಸಕರ ಅನುದಾನ ಬರುತ್ತಿದೆಯೇ?

ಗ್ಯಾರಂಟಿ ಯೋಜನೆ ಅನುಷ್ಟಾನದ ಭರದಲ್ಲಿ ಶಾಸಕರಿಗೆ ಅನುದಾನ ಸಿಗುತ್ತಿಲ್ಲ ಎಂಬ ಮಾತಿದೆ. ಆದರೆ, ತಾನು ಒಳಗೊಂಡAತೆ ಎಲ್ಲಾ ಶಾಸಕರಿಗೂ ಸರಕಾರದಿಂದ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ದೊರೆಯುತ್ತಿದೆ ಎಂದು ಮಂತರ್ ಹೇಳಿದರು. ಕೊಡಗಿನ ಅಭಿವೃದ್ಧಿ ಕಣ್ಣಮುಂದಿದೆ. ಅಲ್ಪಕಾಲದಲ್ಲಿ ಮಾಡಿದ ಕೆಲಸ ತೃಪ್ತಿ ನೀಡಿದೆ. ಆದರೆ, ಇನ್ನೂ ಬೆಟ್ಟದಷ್ಟು ಕೆಲಸ ಬಾಕಿ ಉಳಿದಿದ್ದು, ಅದನ್ನು ಪೂರೈಸುವ ಕೆಲಸ ತನ್ನಿಂದಾಗುತ್ತದೆ. ಜನರ ನಿರೀಕ್ಷೆ ಮುಟ್ಟಿಲ್ಲ ಎಂಬ ನೋವು ಕೂಡ ಇದ್ದು, ಸದ್ಯದಲ್ಲಿಯೇ ಕೊಡಗಿಗೆ ಪೂರಕ ಯೋಜನೆಯನ್ನು ತರುತ್ತೇನೆ ಎಂದು ಭರವಸೆ ನೀಡಿದ ಅವರು, ರೂ. ೧೦ ಕೋಟಿಯ ಎಂಆರ್‌ಐ ಯಂತ್ರ ತರಲು, ಕಾರ್ಡಿಯಾಲಜಿಸ್ಟ್ ಸೆಂಟರ್ ಮಾಡುವ ಕೆಲಸ ಇದುವರೆಗೂ ಆಗಿರಲಿಲ್ಲ. ಅದನ್ನು ಮಾಡಿ ತೋರಿಸಿದ್ದೇನೆ. ಪ್ರವಾಸೋದ್ಯಮ ವಲಯ ಚುರುಕಿಗೆ ಕಾರ್ಯಯೋಜನೆಯಾಗಿದೆ. ಮೂಲಭೂತ ಸೌಕರ್ಯದೊಂದಿಗೆ ಪರಿಸರ ಸ್ನೇಹಿ ಪ್ರವಾಸೋದ್ಯಮ ಸೃಷ್ಟಿ ತನ್ನ ಗುರಿ ಎಂದರು.

ವೈಜ್ಞಾನಿಕ ಕಸ ವಿಲೇವಾರಿ - ವಸತಿ ವ್ಯವಸ್ಥೆ

ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ವೈಜ್ಞಾನಿಕ ಕಸ ವಿಲೇವಾರಿಗೆ ಒತ್ತು ನೀಡಲಾಗುತ್ತಿದೆ. ಕಸ ಕಡಿಮೆ ಮಾಡುವ ನಿಟ್ಟಿನಲ್ಲಿ ಸದ್ಯದಲ್ಲಿಯೇ ಯೋಜನೆ ರೂಪಿಸಲಾಗುವುದು. ಇದಕ್ಕೆ ಪ್ರತಿಯೊಬ್ಬರ ಸಹಕಾರ ಬೇಕಿದೆ. ಗ್ರಾಮೀಣ ಮಟ್ಟದಲ್ಲಿ ತಂಡವನ್ನು ರೂಪಿಸಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗುವುದು ಎಂದ ಮಂತರ್ ಎಲ್ಲರೂ ಒಂದಾಗಿ ‘ಕಸ ಮುಕ್ತ ಕೊಡಗು’ ಮಾಡಲು ಸಂಕಲ್ಪ ಮಾಡಬೇಕೆಂದರು.

ನಿವೇಶನ ರಹಿತ ಬಡವರ್ಗಕ್ಕೆ ವಸತಿ ವ್ಯವಸ್ಥೆ ಕಲ್ಪಿಸುವುದು ಆದ್ಯತೆಯಾಗಿದೆ. ವಿವಿಧ ವಸತಿ ಯೋಜನೆ ಬಳಸಿಕೊಂಡು ನಿವೇಶನ ನೀಡಿ, ವಸತಿ ನಿರ್ಮಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ಹೇಳಿದರು.

ಸಲಹೆ ಸ್ವೀಕರಿಸುತ್ತೇನೆ

ಅಭಿವೃದ್ಧಿ ಕುರಿತು ಸಲಹೆ, ಮಾರ್ಗದರ್ಶನ ಯಾರಿಂದಲೂ ಬಂದರು ಸ್ವೀಕರಿಸುವೆ. ಟೀಕೆಮಾಡುವ ಬದಲು ಸಮಸ್ಯೆ ಪರಿಹಾರಕ್ಕೆ ಸಲಹೆಗಳನ್ನು ನೀಡಿ. ವಿರೋಧ ಪಕ್ಷ ನಾಯಕರ ಸಲಹೆಯನ್ನು ಸ್ವೀಕರಿಸುವ ಗುಣ ತನ್ನದು. ತಪ್ಪುಗಳಿದ್ದಲ್ಲಿ ಸರಿಮಾಡಿಕೊಳ್ಳುವೆ. ಒಂದು ವರ್ಷದ ಅವಧಿಯಲ್ಲಿ ದೊಡ್ಡ ಮಟ್ಟದ ಬೆಂಬಲ ಜನರಿಂದ ವ್ಯಕ್ತವಾಗಿದೆ. ಅವರ ನಿರೀಕ್ಷೆಗೆ ತಕ್ಕ ಕೆಲಸ ತನ್ನಿಂದಾಗುತ್ತದೆ ಎಂದು ಭರವಸೆ ನೀಡಿದರು. ಕೈಗೆ ಸಿಗದ ಅಪವಾದ - ಪಕ್ಷದೊಳಗೆ ಭಿನ್ನಮತ

‘ನೀವು ಸರಿಯಾದ ಸಮಯಕ್ಕೆ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ, ಜನರಿಗೆ ಸುಲಭವಾಗಿ ಸಿಗುತ್ತಿಲ್ಲ ಎಂಬ ಅಪವಾದ ಇದೆ’ ಜೊತೆಗೆ ಪಕ್ಷದೊಳಗೆ ನಿಮ್ಮ ವಿರುದ್ಧದ ಭಿನ್ನಮತ ಎದ್ದಿದ್ದ ಕುರಿತ ಪ್ರಶ್ನೆಗೆ ಉತ್ತರಿಸಿದ ಮಂತರ್ ಗೌಡ, ಉದ್ದೇಶಪೂರ್ವಕವಾಗಿ ತಾನು ಕಾರ್ಯಕ್ರಮಕ್ಕೆ ತೆರಳಲು ತಡಮಾಡುವುದಿಲ್ಲ. ಕೆಲಸದ ಒತ್ತಡದಿಂದ ಒಮ್ಮೊಮ್ಮೆ ಆಗುತ್ತದೆ. ಜನರಿಗಂತೂ ಸುಲಭವಾಗಿ ಸಿಗುತ್ತೇನೆ. ಕ್ಷೇತ್ರ ವ್ಯಾಪಿ ಸಂಚರಿಸುತ್ತಲೆ ಇರುತ್ತೇನೆ. ಈ ಸಂದರ್ಭ ಮನವಿ ಸ್ವೀಕರಿಸುವೆ, ಸಮಸ್ಯೆ ಆಲಿಸುವೆ ಎಂದರು.

ಈ ಹಿಂದೆ ಇದ್ದ ಭಿನ್ನಮತ ಸರಿಪಡಿಸಿಕೊಂಡು ಹೋಗುತ್ತಿದ್ದೇವೆ. ಎಲ್ಲಾ ಪಕ್ಷದಲ್ಲಿ ಇರುವಂತೆ ಭಿನ್ನಾಭಿಪ್ರಾಯ ಮೂಡುವುದು ಸಹಜ. ನಿಷ್ಠಾವಂತ ಕಾರ್ಯಕರ್ತರ ಮಾತಿಗೆ ಬೆಲೆ ನೀಡುತ್ತೇನೆ. ಈಗ ಎಲ್ಲವೂ ಸರಿಯಾಗಿದೆ. ಪಕ್ಷದ ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯವಿದೆ. ಸರಕಾರದ ಅಧೀನದ ಸಂಸ್ಥೆಗಳಿಗೆ ನಾಮನಿರ್ದೇಶನ, ಪಕ್ಷದಲ್ಲಿ ಹುದ್ದೆ ನೀಡುವ ಕೆಲಸ ತಾನು ಮಾಡಿಲ್ಲ. ಕೆಲವರು ತಪ್ಪಾಗಿ ಅರ್ಥೈಸಿಕೊಂಡು ತನ್ನ ವಿರುದ್ಧ ಮಾತನಾಡಿದರು. ಅದು ಸರಿಯಾಗಿದೆ ಎಂದರು. ವಿರೋಧಿ ನಿಯಮ ಜಾರಿಯ ಬಗ್ಗೆ ಏನಂತೀರ?

ಮರಗಳ ಗಣತಿ, ಪಾರಂಪರಿಕ ವನ್ಯಜೀವಿ ಉತ್ಪನ್ನ ಹಿಂದಿರುಗಿಸುವ ವಿಚಾರಗಳಿಗೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಇದರ ಬಗ್ಗೆ ನಿಮ್ಮ ನಿಲುವೇನು? ಎಂಬ ಪ್ರಶ್ನೆಯ ಕುರಿತು ಮಾತನಾಡಿದ ಮಂತರ್, ರಾಜ್ಯ ಸರಕಾರ ಕೊಡಗಿನ ಹಿತಕಾಯಲು ಬದ್ಧವಾಗಿದೆ. ಮರಗಣತಿ ಹಾಗೂ ವನ್ಯಜೀವಿ ಉತ್ಪನ್ನ ಹಿಂದಿರುಗಿಸುವ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಗಮನ ಸೆಳೆದಿದ್ದೆ ಎಂದರು. ಹಿಂದಿನ ಸರಕಾರದ ಯೋಜನೆಗಳಂತೆ?

ಹಿAದಿನ ಬಿಜೆಪಿ ಸರಕಾರದ ಯೋಜನೆಗಳಿಗೆ ಹಾಲಿ ಶಾಸಕರು ಭೂಮಿಪೂಜೆ, ಉದ್ಘಾಟನೆ ಮಾಡುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಉತ್ತರಿಸಿದ ಮಂತರ್, ೨೦-೨೫ ವರ್ಷಗಳ ಕೊಡಗಿನಲ್ಲಿ ಅಧಿಕಾರ ನಡೆಸಿ ಕನಿಷ್ಟ ಸಮಸ್ಯೆ ಬಗೆಹರಿಸುವಲ್ಲಿ ವಿಫಲತೆ ಆಗಿದೆ. ಅದನ್ನು ಸರಿಪಡಿಸಿದರೆ ಟೀಕೆ ಮಾಡುತ್ತಾರೆ. ವಿರೋಧ ಪಕ್ಷಕ್ಕೆ ಟೀಕೆ ಮಾಡುವುದೊಂದೇ ಕೆಲಸ. ನಮ್ಮ ಸರಕಾರ ಕೊಡಗಿನ ಅಭಿವೃದ್ಧಿಗೆ ಅಪಾರ ಅನುದಾನ ನೀಡಿದೆ. ಹಿಂದಿನ ಸರಕಾರ ಪೂರ್ಣಗೊಳಿಸಲಾಗದ ಕೆಲಸವನ್ನು ನಮ್ಮ ಸರಕಾರ ಮಾಡಿದೆ. ಇದರಲ್ಲಿ ತಪ್ಪಿಲ್ಲ ಎಂದ ಅವರು, ಅಪೂರ್ಣ ಕಾಮಗಾರಿಗಳನ್ನು ಮುಗಿಸುವ ನಿಟ್ಟಿನಲ್ಲಿ ಈಗಾಗಲೇ ಸೂಚನೆ ನೀಡಿದ್ದು, ಅನುದಾನದ ಅವಶ್ಯಕತೆ ಇದ್ದಲ್ಲಿ ಅದನ್ನು ನೀಡುವ ಕೆಲಸವಾಗುತ್ತದೆ ಎಂದರು.