ಮಡಿಕೇರಿ, ಮೇ ೩೦: ಕೊಡಗು ಗೌಡ ನಿವೃತ್ತ ನೌಕರರ ಸಂಘದ ನೇತೃತ್ವದಲ್ಲಿ ರೋಟರಿ ಮಿಸ್ಟಿ ಹಿಲ್ಸ್, ಮಡಿಕೇರಿಯ ವಿನೋದ್ ಮೆಡಿಕಲ್ಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂದತ್ವ ನಿಯಂತ್ರಣ ವಿಭಾಗ ಹಾಗೂ ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ರೆಡ್ ಕ್ರಾಸ್ ಘಟಕದ ಸಹಯೋಗದೊಂದಿಗೆ ಸಾರ್ವಜನಿಕರಿಗಾಗಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.

ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸುವರ್ಣ ಭವನದಲ್ಲಿ ನಡೆದ ಶಿಬಿರದಲ್ಲಿ ನೇತ್ರ ತಜ್ಞ ಡಾ.ಸಿ.ಆರ್. ಪ್ರಶಾಂತ್ ಅವರು ಕಣ್ಣು ತಪಾಸಣೆ ನಡೆಸಿದರು.

ಆರೋಗ್ಯ ಸಿಬ್ಬಂದಿಗಳಾದ ರವಿ ಆರ್ಯನ್, ರವಿಕುಮಾರ್ ಹಾಗೂ ಆದರ್ಶ್ ಕಣ್ಣಿನ ದೃಷ್ಟಿಯನ್ನು ಪರಿಶೀಲಿಸಿ ವರದಿ ನೀಡಿದರು. ಇದೇ ಸಂದರ್ಭ ಮಡಿಕೇರಿಯ ವಿನೋದ್ ಮೆಡಿಕಲ್ಸ್ ನಿಂದ ಉಚಿತ ಔಷಧಿ ವಿತರಿಸಲಾಯಿತು.

ಅಗತ್ಯವಿದ್ದವರು ಉಚಿತ ಕನ್ನಡಕವನ್ನು ಜೂನ್ ೧೮ ರಂದು ಕೊಡಗು ಗೌಡ ನಿವೃತ್ತ ನೌಕರರ ಸಂಘದ ಮೂಲಕ ಪಡೆಯಬಹುದು ಎಂದು ಸಂಘದ ಅಧ್ಯಕ್ಷ ಕೋರನ ವಿಶ್ವನಾಥ್ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಪಾಲಿಟೆಕ್ನಿಕ್ ಕಾಲೇಜ್ ನ ಆಡಳಿತ ಮಂಡಳಿಯ ಅಧ್ಯಕ್ಷ ದಿನೇಶ್, ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ಈ ರೀತಿಯ ಶಿಬಿರಗಳು ಸಾರ್ವಜನಿಕರಿಗೆ ಹೆಚ್ಚು ಸಹಕಾರಿಯಾಗಲಿವೆ ಎಂದರು.

ಮತ್ತೋರ್ವ ಅತಿಥಿ ರೋಟರಿ ಮಿಸ್ಟಿ ಹಿಲ್ಸ್ನ ನಿಯೋಜಿತ ಅಧ್ಯಕ್ಷ ಪೊನ್ನಚ್ಚನ ಮಧು ಮಾತನಾಡಿ, ಸಂಘದ ಹಿರಿಯರು ಹಾಗೂ ಎಲ್ಲಾ ಸದಸ್ಯರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.

ಸಂಘದ ಅಧ್ಯಕ್ಷ ಕೋರನ ವಿಶ್ವನಾಥ್ ಸ್ವಾಗತಿಸಿ, ಕಾರ್ಯದರ್ಶಿ ಬಾರಿಕೆ ಅಯ್ಯಪ್ಪ ನಿರೂಪಿಸಿದರು. ಉಪಾಧ್ಯಕ್ಷ ಕುದುಪಜೆ ಬೋಜಪ್ಪ, ಖಜಾಂಚಿ ಕರ್ಣಯ್ಯನ ನಾಗೇಶ್, ಸಹ ಕಾರ್ಯದರ್ಶಿ ಅತ್ತೇಡಿ ಕೃಷ್ಣಪ್ಪ, ನಿರ್ದೇಶಕರಾದ ಉಮಾವತಿ ಹಾಗೂ ವಿನೋದ್ ಮೆಡಿಕಲ್ಸ್ನ ಮಾಲೀಕ ಅಂಬೆಕಲ್ ಕುಶಾಲಪ್ಪ ಉಪಸ್ಥಿತರಿದ್ದರು.