ಮಡಿಕೇರಿ, ಮೇ ೩೦: ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯೂ ಜುಲೈ ತಿಂಗಳ ಮೊದಲ ವಾರದಲ್ಲಿ ನಡೆಯುವ ಸಾಧ್ಯತೆಗಳಿವೆ.

ಕೊಡಗು ಜಿಲ್ಲೆ ಹೊರತುಪಡಿಸಿ ೨೦೨೩ ಡಿಸೆಂಬರ್ ೧೯ ರಂದು ರಾಜ್ಯದ ೩೦ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಮತ್ತು ೨೩೪ ತಾಲೂಕು ಪಂಚಾಯಿತಿಗಳ ಸದಸ್ಯರ ಸಂಖ್ಯೆ, ವರ್ಗವಾರು ಮೀಸಲು ಸಂಖ್ಯೆ ಹಾಗೂ ಕ್ಷೇತ್ರಗಳ ಗಡಿಯನ್ನು ನಿಗದಿಪಡಿಸಿ ರಾಜ್ಯ ಸರ್ಕಾರ ಗೆಝೆಟ್ ಅಧಿಸೂಚನೆ ಹೊರಡಿಸಿ, ಆಕ್ಷೇಪಣೆಗೆ ಅವಕಾಶ ನೀಡಲಾಗಿತ್ತು.

ಆದರೆ ಕೊಡಗು ಜಿಲ್ಲೆಯ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್‌ವಿಂಗಡಣೆಯನ್ನು, ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಮತ್ತು ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಇದುವರೆಗೆ ಕ್ಷೇತ್ರಗಳ ಸಂಖ್ಯೆ, ಗಡಿ, ಮೀಸಲು ಸಂಖ್ಯೆ ಪ್ರಕಟಿಸಲು ಸಾಧ್ಯವಾಗಿಲ್ಲ.

ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಕೊಡಗು ಜಿಲ್ಲೆಯ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಸಂಖ್ಯೆ, ಕ್ಷೇತ್ರದ ಗಡಿ ಹಾಗೂ ವರ್ಗವಾರು ಮೀಸಲು ಪ್ರಕಟಿಸುವ ಸಾಧ್ಯತೆ ಇದೆ. ಕಳೆದ ಡಿಸೆಂಬರ್ ತಿಂಗಳಿನಲ್ಲೆ ಕೊಡಗು ಹೊರತುಪಡಿಸಿ, ರಾಜ್ಯದ ಉಳಿದ ೩೦ ಜಿಲ್ಲೆಗಳ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ, ಗಡಿ, ವರ್ಗವಾರು ಮೀಸಲು ಸಂಖ್ಯೆಯನ್ನು ರಾಜ್ಯ ಸರ್ಕಾರ ಪ್ರಕಟಿಸಿತ್ತು.

೨೯ ರಿಂದ ೨೫ಕ್ಕೆ ಇಳಿಕೆ ಮಾಡಲಾಗಿತ್ತು!

ಈ ಹಿಂದಿನ ಬಿಜೆಪಿ ಸರ್ಕಾರವು ಅವಧಿ ಮುಗಿದ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ತೀರ್ಮಾನ ಮಾಡಲು ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವನ್ನು ರಚಿಸಲಾಗಿತ್ತು.

ಬಿಜೆಪಿ ಸರ್ಕಾರ ಅವಧಿಯಲ್ಲಿ ೨೦೨೩ ಜನವರಿ ತಿಂಗಳಲ್ಲಿ ಸೀಮಾ ನಿರ್ಣಯ ಆಯೋಗವು ಕ್ಷೇತ್ರಗಳ ಪುನರ್‌ವಿಂಗಡಣೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಕಳೆದ ವರ್ಷ ಜನವರಿ ತಿಂಗಳಲ್ಲಿ ಪ್ರಕಟಗೊಂಡಿದ್ದ ಕ್ಷೇತ್ರಗಳ ಪುನರ್‌ವಿಂಗಡಣೆಗೆ ದೊಡ್ಡ ಆಕ್ಷೇಪ ಕೂಡ ವ್ಯಕ್ತವಾಗಿತ್ತು. ನಿವೃತ್ತ ಐಎಎಸ್ ಅಧಿಕಾರಿ ಎಂ. ಲಕ್ಷ್ಮೀನಾರಾಯಣ ಆಯೋಗವು ಪ್ರಕಟಿಸಿದ್ದ ಕರಡುಪಟ್ಟಿಯನ್ನು ಬದಲಾಯಿಸಿ ಕಾಂಗ್ರೆಸ್ ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್ ಕಾಂಬ್ಳೆ ನೇತೃತ್ವದಲ್ಲಿ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವನ್ನು ರಚಿಸಿತ್ತು. ೨೦೨೩ ಸೆಪ್ಟೆಂಬರ್ ೫ ರಂದು ಪ್ರಕಟಗೊಂಡಿದ್ದ ಕರಡು ಪಟ್ಟಿಯಲ್ಲಿ ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗದೆ ಜಿಲ್ಲೆಯ ಜನತೆಗೆ ನಿರಾಸೆಯುಂಟಾಗಿತ್ತು. ಒಟ್ಟು ೨೯ ಕ್ಷೇತ್ರಗಳಿದ್ದ ಕೊಡಗಿನಲ್ಲಿ ಜನವರಿ ತಿಂಗಳಲ್ಲಿ ಪ್ರಕಟಗೊಂಡ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್‌ವಿಂಗಡಣೆಯಲ್ಲಿ ೨೫ ಕ್ಷೇತ್ರಕ್ಕೆ ಇಳಿಸಲಾಗಿತ್ತು. ನಾಲ್ಕು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಕಡಿತಗೊಳಿಸಲಾಗಿತ್ತು.

ಸೆಪ್ಟೆಂಬರ್ ತಿಂಗಳ ೫ ರಂದು ಪ್ರಕಟಗೊಂಡಿದ್ದ ಕ್ಷೇತ್ರಗಳ ಪುನರ್‌ವಿಂಗಡನೆ ಪಟ್ಟಿಯಲ್ಲಿ ಮತ್ತೆ ೨೫ ಜಿಲ್ಲಾ ಪಂಚಾಯಿತಿ ಏಕ ಸದಸ್ಯ ಕ್ಷೇತ್ರಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.

ಜನವರಿ ತಿಂಗಳಲ್ಲಿ ಪ್ರಕಟಗೊಂಡಿದ್ದ ಸೀಮಾ ನಿರ್ಣಯ ಆಯೋಗದಲ್ಲಿ ಕೊಡಗು ಜಿಲ್ಲೆಯ ೨೦೧೬ರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿದ್ದ ಕ್ಷೇತ್ರಗಳ ಹೆಸರು ಹಾಗೂ ಪಂಚಾಯಿತಿಗಳು ಅದಲು-ಬದಲಾಗಿತ್ತು. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಬಹುತೇಕ ೨೦೧೬ ರಲ್ಲಿ ಇದ್ದ ಕ್ಷೇತ್ರಗಳ ಮಾದರಿಯಲ್ಲಿಯೇ ಅಧಿಸೂಚನೆ ಹೊರಡಿಸಲಾಗಿತ್ತು.

ಆದರೆ ಕೆಲವೊಂದು ಕ್ಷೇತ್ರಗಳನ್ನು ಪುನರ್‌ವಿಂಗಡಿಸುವಾಗ ಎಡವಟ್ಟುವುಂಟಾಗಿದ್ದು, ಕ್ಷೇತ್ರಕ್ಕೆ ಹತ್ತಿರವಲ್ಲದ ಗ್ರಾಮ ಪಂಚಾಯಿತಿಗಳನ್ನು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸೇರಿಸಲಾಗಿತ್ತು.

ಸೆಪ್ಟೆಂಬರ್ ೧೯ ಸಂಜೆ ೫ ಗಂಟೆಯವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದಕ್ಕೆ ಜಿಲ್ಲೆಯ ಜನರ ಮಧ್ಯೆ ದೊಡ್ಡ ಆಕ್ಷೇಪ ಕೂಡ ವ್ಯಕ್ತವಾಗಿತ್ತು.

ಕೊಡಗು ಜಿಲ್ಲಾ ಕಾಂಗ್ರೆಸ್ ನಿಯೋಗವು ಶಾಸಕರಾದ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣಭೈರೇಗೌಡ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ, ಕೊಡಗು ಜಿಲ್ಲೆ ಪುನಃ ೨೯ ಜಿಲ್ಲಾ ಪಂಚಾಯಿತಿ ಸ್ಥಾನಗಳನ್ನು ನೀಡಿ, ವಿಶೇಷವಾಗಿ ಪರಿಗಣಿಸಬೇಕೆಂದು ಮನವಿ ಸಲ್ಲಿಸಿದ್ದರು.

ವಿಧೇಯಕಕ್ಕೆ ತಿದ್ದುಪಡಿ

ಬೆಳಗಾವಿಯಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲಿ ಕೊಡಗಿನ ಶಾಸಕದ್ವಯರಾದ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಅವರು, ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಸ್ಥಾನಗಳನ್ನು ೨೯ ರಿಂದ ೨೫ಕ್ಕೆ ಇಳಿಸಿರುವುದಕ್ಕೆ ಸದನದಲ್ಲಿ ಪ್ರಸ್ತಾಪಿಸಿದ್ದರು.

ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ೨೯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಇತ್ತು. ಇದೀಗ ೨೫ ಕ್ಕೆ ಇಳಿಸಲಾಗಿದೆ.

೧೮ ಸಾವಿರದ ಬದಲು ೧೭ ಸಾವಿರಕ್ಕೆ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರ ಎಂದು ಕೊಡಗು ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ, ೨೯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಮರಳಿ ಸ್ಥಾಪನೆ ಮಾಡಬೇಕೆಂದು ಶಾಸಕರಾದ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಅವರು ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು.

ಕೊಡಗಿನ ಶಾಸಕದ್ವಯರ ಪ್ರಸ್ತಾಪಕ್ಕೆ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಪೂರಕವಾಗಿ ಸ್ಪಂದಿಸಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ತಿದ್ದುಪಡಿ ವಿಧೇಯಕಕ್ಕೆ ತಿದ್ದುಪಡಿ ತರಬೇಕಾಗಿದೆ, ಎಲ್ಲರೂ ಸಹಕಾರ ನೀಡಿದರೆ ವಿಧೇಯಕಕ್ಕೆ ತಿದ್ದುಪಡಿ ತರಲಾಗುವುದೆಂದು ಸದನದಲ್ಲಿ ಕೃಷ್ಣಭೈರೇಗೌಡ ಉತ್ತರ ನೀಡಿದ್ದರು.

ಫೆಬ್ರವರಿ ತಿಂಗಳಲ್ಲಿ ಬಜೆಟ್ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಧೇಯಕವನ್ನು ಮಂಡಿಸಿ, ವಿಧೇಯಕಕ್ಕೆ ಒಪ್ಪಿಗೆ ನೀಡಲಾಗಿತ್ತು.

ಸಾಮಾನ್ಯವಾಗಿ ತಾಲೂಕಿನಿಂದ ಚುನಾಯಿತರಾಗುವ ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನವನ್ನು ೩೫ ರಿಂದ ೪೫ ಸಾವಿರ ಜನಸಂಖ್ಯೆಗೆ ನಿಗದಿಪಡಿಸಿದೆ. ಆದರೆ ಚಿಕ್ಕಮಗಳೂರು (ತರೀಕೆರೆ, ಕಡೂರು, ಅಜ್ಜಂಪುರ ಹೊರತುಪಡಿಸಿ) ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜನಸಂಖ್ಯೆ ಇರುವುದರಿಂದ ಪ್ರತೀ ೧೮ ರಿಂದ ೨೫ ಸಾವಿರಕ್ಕೆ ಒಂದು ಸದಸ್ಯ ಸ್ಥಾನ ಸೃಷ್ಟಿಸಲಾಗಿದೆ. ಇದೇ ರೀತಿ ಕೊಡಗಿನಲ್ಲೂ ೧೭ ಅಥವಾ ೧೮ ರಿಂದ ೨೫ ಸಾವಿರ ಜನಸಂಖ್ಯೆಗೆ ಒಂದು ಸದಸ್ಯ ಸ್ಥಾನ. ಇನ್ನು ೭ ರಿಂದ ೯.೫ ಲಕ್ಷ ಮೀರಿರುವ ಗ್ರಾಮೀಣ ಜಿಲ್ಲೆಯಲ್ಲಿ ೨೮ ಮಂದಿ ಸದಸ್ಯರು ಇರಬೇಕೆಂದು ಫೆಬ್ರವರಿ ತಿಂಗಳಲ್ಲಿ ಬಜೆಟ್ ಅಧಿವೇಶನದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ತಿದ್ದುಪಡಿ ವಿಧೇಯಕಕ್ಕೆ ತಿದ್ದುಪಡಿ ತರಲಾಗಿತ್ತು.

ಕೊಡಗು ಜಿಲ್ಲೆಯಲ್ಲಿ ಈ ಹಿಂದಿನಿAತೆ ೨೯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಮರುಸ್ಥಾಪನೆಯಾಗಲಿವೆ.

ಮಹಿಳೆಯರಿಗೆ ಶೇ. ೫೦ ರಷ್ಟು ಮೀಸಲು!

ಆಯಾ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳ ಒಟ್ಟು ಸದಸ್ಯರ ಸಂಖ್ಯೆಯಲ್ಲಿ ಶೇ. ೫೦ ರಷ್ಟನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಈ ರೀತಿ ಮೀಸಲಿಟ್ಟ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಅ ಮತ್ತು ಬ ವರ್ಗ ಹಾಗೂ ಸಾಮಾನ್ಯ ಮಹಿಳೆಯರಿಗೆ ಮೀಸಲಿಡಲಾಗಿದೆ.

ಒಟ್ಟಿನಲ್ಲಿ ಕಳೆದ ಮೂರು ವರ್ಷಗಳಲಿಂದ ಚುನಾವಣೆ ನಡೆಯದೆ, ಅಧಿಕಾರಿಗಳೇ ಆಡಳಿತ ನಡೆಸುತ್ತಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ ಜುಲೈ ತಿಂಗಳ ಮೊದಲ ವಾರದಲ್ಲಿಯೇ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

ಮಳೆಯ ನೆಪವೊಡ್ಡಿ ರಾಜ್ಯದ ಸರ್ಕಾರ ಚುನಾವಣೆಯನ್ನು ಮುಂದೂಡುವ ಸಾಧ್ಯತೆಗಳನ್ನು ಕೂಡ ಅಲ್ಲಗಳೆಯುವಂತಿಲ್ಲ.

- ಕೆ.ಎಂ. ಇಸ್ಮಾಯಿಲ್ ಕಂಡಕರೆ