ಪಾಲಿಬೆಟ್ಟ, ಮೇ ೩೧: ಚೆನ್ನಂಗಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಸಕ್ತ ಸಾಲಿನ ಶೈಕ್ಷಣಿಕ ಬಲವರ್ಧನ ಕಾರ್ಯಕ್ರಮದ ಪೂರಕವಾಗಿ ವಿದ್ಯಾಪ್ರವೇಶ ಮತ್ತು ಸೇತುಬಂಧ ಕಾರ್ಯಕ್ರಮಕ್ಕೆ ಅಲಂಕೃತಗೊAಡಿರುವ ನೂತನ ಕೊಠಡಿಯಲ್ಲಿ ಗಣ್ಯರು ಚಾಲನೆ ನೀಡಿದರು.

ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಕೇರಿರ ಅರುಣ್ ಕುಮಾರ್ ಮಾತನಾಡಿ, ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ನೀಡುತ್ತಿದ್ದು, ಇದರ ಸದ್ಬಳಕೆ ಮಾಡಿಕೊಳ್ಳುವುದರೊಂದಿಗೆ ವಿದ್ಯಾರ್ಥಿಗಳು ಶಾಲೆಗೆ ತಪ್ಪದೆ ಹಾಜರಾಗುವ ಮೂಲಕ ಕಲಿಕೆಯ ಗುರಿಯೊಂದಿಗೆ ಮುನ್ನಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.

ಪಾಲಿಬೆಟ್ಟದ ಸಮಾಜ ಸೇವಕ ಡಾ. ಎ.ಸಿ. ಗಣಪತಿ ಮಾತನಾಡಿ, ಈ ಹಿಂದೆ ಮೂಲಸೌಕರ್ಯ ವಂಚಿತರಾಗಿ ಶಿಕ್ಷಣ ಕಲಿತ ಅದೆಷ್ಟೋ ಮಂದಿ ಉನ್ನತ ಹುದ್ದೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಇದೀಗ ಸರ್ಕಾರ ಹಾಗೂ ದಾನಿಗಳ ಸಹಕಾರದಿಂದ ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯಗಳು ಸಿಗುತ್ತಿದ್ದು, ಇದರ ಸದುಪಯೋಗಪಡಿಸಿಕೊಂಡು ಮುನ್ನಡೆದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ.

ಕಾಡಂಚಿನ ಗ್ರಾಮೀಣ ಭಾಗದ ಶಾಲೆಯಾದರೂ ಮಕ್ಕಳಿಗೆ ಯಾವುದೇ ಕೊರತೆ ಬಾರದಂತೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳುವುದರ ಮೂಲಕ ಮಾದರಿ ಶಾಲೆಯನ್ನಾಗಿಸಿದ ಶಿಕ್ಷಕರ ಹಾಗೂ ಆಡಳಿತ ಮಂಡಳಿಯವರ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಭಯ ಬೀತರಾಗುತ್ತಿರುವ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆ ವಾಹನದ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಮನವಿ ಮಾಡಿದ ಅವರು, ಪೋಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವ ಮೂಲಕ ಮಕ್ಕಳ ಭವಿಷ್ಯವನ್ನು ರೂಪಿಸಲು ಮುಂದಾಗಬೇಕೆAದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಮಾತನಾಡಿ, ಬಸ್ ಸಂಚಾರವಿಲ್ಲದ ಗ್ರಾಮೀಣ ಭಾಗದ ಶಾಲೆಗೆ ಶಿಕ್ಷಕರುಗಳು ದೂರದಿಂದ ಆಗಮಿಸಿ ಶಿಕ್ಷಣ ಕಲಿಸುವು ದರೊಂದಿಗೆ ಶಾಲೆಯ ಪರಿಸರವನ್ನ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡಿದ್ದಾರೆ.

ಪ್ರಸಕ್ತ ಶೈಕ್ಷಣಿಕ ಸಾಲಿಗೆ ಮಕ್ಕಳನ್ನು ಕಡ್ಡಾಯವಾಗಿ ಹಾಜರಾತಿ ಮಾಡಿಸುವುದರ ಮೂಲಕ ಶಿಕ್ಷಕರುಗಳು ಮಾದರಿಯಾಗಿದ್ದಾರೆ. ರಜಾ ಸಂದರ್ಭದಲ್ಲೂ ಶಾಲೆಗೆ ಭೇಟಿ ನೀಡುವುದರ ಮೂಲಕ ಕೊಠಡಿಗಳನ್ನು ಚಿತ್ರ ಬರಹಗಳೊಂದಿಗೆ ಶೈಕ್ಷಣಿಕ ವಿದ್ಯಮಾನವನ್ನು ಗಮನದಲ್ಲಿಟ್ಟುಕೊಂಡು ಪರಿಸರ, ಶುಚಿತ್ವ, ಕಲೆ, ಸಾಹಿತ್ಯ, ವಿಜ್ಞಾನ ಸೇರಿದಂತೆ ಹಲವಾರು ವಿಭಿನ್ನ ಚಿತ್ರ ಆಕಾರಗಳ ಮೂಲಕ ಗಮನ ಸೆಳೆಯುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆದಿವಾಸಿ ಮುಖಂಡ ಪಿ.ಕೆ. ಸಿದ್ದಪ್ಪ ಮಾತನಾಡಿ, ಸರ್ಕಾರ ಹಾಗೂ ದಾನಿಗಳ ಸಹಕಾರದಿಂದ ಶಾಲೆ ಅಚ್ಚುಕಟ್ಟಾಗಿ ನಡೆಯುತ್ತಿದ್ದು ಶಾಲೆಯಲ್ಲಿ ಹೆಚ್ಚಾಗಿ ಆದಿವಾಸಿ ಮಕ್ಕಳೇ ಕಲಿಯುತ್ತಿದ್ದಾರೆ.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಅವರು ಎಲ್ಲ ಮಕ್ಕಳಿಗೆ ಗುಣಮಟ್ಟದ ಬ್ಯಾಗ್‌ಗಳನ್ನು ವಿತರಣೆ ಮಾಡಿದ್ದಾರೆ. ಸಮಾಜ ಸೇವಕ ಎ.ಸಿ. ಗಣಪತಿಯವರು ಪರೀಕ್ಷಾ ಸಾಲಿನ ಸಂದರ್ಭ ಕಾಡು ಪ್ರಾಣಿಗಳ ಭಯದಿಂದ ಪರೀಕ್ಷೆಗೆ ಬರಲು ಹಿಂದೇಟಾಕುತ್ತಿದ್ದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಾಹನ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.

ಅರಣ್ಯ ಇಲಾಖೆ ಕೂಡಲೇ ಮಕ್ಕಳನ್ನು ಶಾಲೆಗೆ ಕಳಿಸಲು ವಾಹನದ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಮನವಿ ಮಾಡಿದರು. ಶಾಲಾ ಮುಖ್ಯ ಶಿಕ್ಷಕಿ ಕೆ.ಕೆ. ಸುಷ್ಮಾ ಮಾತನಾಡಿ, ಶಿಕ್ಷಣ ಇಲಾಖೆ ಹಾಗೂ ದಾನಿಗಳ ಸಹಕಾರದಿಂದ ಶಾಲಾ ಕೊಠಡಿಗಳನ್ನು ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಅಲಂಕೃತಗೊಳಿಸಲಾಗಿದೆ. ಶೈಕ್ಷಣಿಕ ಶಾಲೆಗೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು ಮಕ್ಕಳ ಹಾಜರಾತಿಯನ್ನು ಹೆಚ್ಚಿಸಲು ಮುಂದಾಗಿದ್ದೇವೆ ಎಂದರು. ಈ ಸಂದರ್ಭ ಸಮಾಜ ಸೇವಕ ಡಾ. ಎ.ಸಿ. ಗಣಪತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಬೇಬಿ, ಶಾಲಾ ಶಿಕ್ಷಕ ಅಶ್ರಫ್, ಹುಂಡಿ ಶಾಲಾ ಶಿಕ್ಷಕಿ ಶೈಲಾ ಸೇರಿದಂತೆ ಶಾಲಾ ಶಿಕ್ಷಕರಗಳಾದ ಮಂಜುಳಾ, ಪ್ರತಿಮಾ, ಸತೀಶ್ ಸೇರಿದಂತೆ ಪೋಷಕರು ಹಾಜರಿದ್ದರು.