ಕೂಡಿಗೆ, ಮೇ ೩೧: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನಡೆಸುವ ವಿಜ್ಞಾನ ಮಾದರಿ ತಯಾರಿಕೆಯ ರಾಷ್ಟçಮಟ್ಟದ ಇನ್ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡಿಗೆಯ ಜ್ಞಾನೋದಯ ಶಾಲೆ ವಿದ್ಯಾರ್ಥಿ ಡಿ.ಎಂ. ಶ್ರೇಯಸ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶಾಲಾ ಮಕ್ಕಳಲ್ಲಿರುವ ವೈಜ್ಞಾನಿಕ ಪ್ರತಿಭೆ ಸಂಶೋಧನಾ ಮನೋಭಾವ ನಾವಿನ್ಯ ಚಿಂತನೆಗಳನ್ನು ನಾಗರಿಕ ಸಮಾಜಕ್ಕೆ ಉಪಯುಕ್ತವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರತಿ ವರ್ಷ ದೇಶದಾದ್ಯಂತ ರಾಷ್ಟçಮಟ್ಟದ ಮಾದರಿ ತಯಾರಿಕೆ ಸ್ಪರ್ಧೆ ನಡೆಸುತ್ತದೆ.

ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ, ಬಳಿಕ ರಾಜ್ಯಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳು ರಾಷ್ಟçಮಟ್ಟಕ್ಕೆ ಆಯ್ಕೆ ಆಗುತ್ತಾರೆ. ದೆಹಲಿಯಲ್ಲಿ ನಡೆಯುವ ರಾಷ್ಟçಮಟ್ಟದ ಸ್ಪರ್ಧೆಯ ಅಂತಿಮ ಹಂತದಲ್ಲಿ ದೇಶದಿಂದ ೬೦ ವಿದ್ಯಾರ್ಥಿಗಳ ಮಾದರಿಗಳನ್ನು ಆಯ್ಕೆ ಮಾಡಲಾಗುತ್ತದೆ. ೬೦ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಆಯ್ದ ವಿದ್ಯಾರ್ಥಿಗಳು ಜಪಾನಿನಲ್ಲಿ ನಡೆಯುವ ವಿಜ್ಞಾನ ವಿನಿಮಯ ಮೇಳ ‘ಸುಕುರಾ' ಕಾರ್ಯಕ್ರಮದಲ್ಲಿ ಭಾಗವಹಿಸುವ ಸುವರ್ಣಾವಕಾಶ ಪಡೆಯುತ್ತಾರೆ.