ಕೂಡಿಗೆ, ಮೇ ೩೦: ಹಾರಂಗಿ ಮತ್ತು ಯಡವನಾಡು, ಅತ್ತೂರು, ಹುದುಗೂರು ಗ್ರಾಮಕ್ಕೆ ಹೆಚ್ಚುವರಿ ವಿದ್ಯುತ್ ಫೀಡರ್ ಅಳವಡಿಕೆ ಮಾಡುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಮನವಿ ಸಲ್ಲಿಸಿದ್ದಾರೆ.

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಮತ್ತು ರಾಜ್ಯಕ್ಕೆ ನೀರುಣಿಸುವ ಅಣೆಕಟ್ಟೆಯಲ್ಲಿ ಪ್ರಮುಖ ಹಾರಂಗಿ ಅಣೆಕಟ್ಟೆಗೆ ಸರಿಯಾದ ವಿದ್ಯುತ್ ಸರಬರಾಜು ಇಲ್ಲದಂತಾಗಿದೆ. ಕುಶಾಲನಗರದಿಂದ ಕೂಡಿಗೆ, ಭುವನಗಿರಿ ಮಾರ್ಗವಾಗಿ ಸುಮಾರು ೬೦ ಕಿ.ಮೀ. ನಷ್ಟು ಬಳಸಿಕೊಂಡು ಕೊನೆಯದಾಗಿ ಹಾರಂಗಿ ಮತ್ತು ಯಡವನಾಡು ಅತ್ತೂರು, ಹುದುಗೂರು ಗ್ರಾಮಗಳಿಗೆ ವಿದ್ಯುತ್ ಸರಬರಾಜು ಆಗುತ್ತಿರುವುದರಿಂದ ಈ ಮಾರ್ಗ ಮಧ್ಯ ಯಾವುದಾದರೂ ಮರ ವಿದ್ಯುತ್ ತಂತಿ ಮೇಲೆ ಬಿದ್ದರೆ ವಿದ್ಯುತ್ ಕಡಿತವಾಗುತ್ತದೆ. ಸಣ್ಣ ಗಾಳಿ, ಮಳೆ ಬಂದರೂ ಹಾರಂಗಿ ಅಣೆಕಟ್ಟೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಕಡಿತವಾದ ಕೂಡಲೇ ಅಣೆಕಟ್ಟೆಯ ಮುಂಭಾಗದಲ್ಲಿರುವ ಬಿಎಸ್‌ಎನ್‌ಎಲ್ ಟವರ್‌ನಲ್ಲಿ ಯಾವುದೇ ನೆಟ್‌ವರ್ಕ್ ಇಲ್ಲದಂತಾಗುತ್ತದೆ. ಅಣೆಕಟ್ಟೆಯಲ್ಲಿ ಮತ್ತು ಮುಂಭಾಗದ ಗ್ರಾಮಗಳಲ್ಲಿ ಏನಾದರೂ ಹೆಚ್ಚು ಕಡಿಮೆ ಆದರೆ ಕರೆ ಮಾಡಲು ನೆಟ್‌ವರ್ಕ್ ಪ್ರಾಬ್ಲಮ್ ಕೂಡ ಎದುರಾಗುತ್ತಿದೆ. ಅಣೆಕಟ್ಟೆಗೆ ಸಂಗೀತ ಕಾರಂಜಿ ನೋಡಲು ಬರುವಂತಹ ಪ್ರವಾಸಿಗರು ಹಲವು ಬಾರಿ ಕಾರಂಜಿ ನೋಡದೆ ನಿರಾಸೆಯಿಂದ ತೆರಳಿದ ಘಟನೆ ಕೂಡ ಸಂಭವಿಸಿದೆ, ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜಿಗೂ ಸಮಸ್ಯೆ ಉಂಟಾಗುತ್ತಿದೆ.

ಅಣೆಕಟ್ಟೆ ತುಂಬಿದAಥ ಸಂದರ್ಭ ಯಾವುದೇ ಸಮಯದಲ್ಲಿ ಯಾವುದೇ ಸಮಸ್ಯೆ ಕೂಡ ಉಂಟಾಗಬಹುದಾಗಿರುವುದರಿAದ ಆದಷ್ಟು ಬೇಗ ಹಾರಂಗಿ ಅಣೆಕಟ್ಟೆಗೆ ಭದ್ರತಾ ದೃಷ್ಟಿ ಮತ್ತು ಅಣೆಕಟ್ಟೆಯ ಸುತ್ತಮುತ್ತಲಿನ ಪ್ರದೇಶಗಳು ಅರಣ್ಯ ಪ್ರದೇಶಗಳಾಗಿರುವುದರಿಂದ ಗ್ರಾಮಸ್ಥರಿಗೆ ವನ್ಯಜೀವಿಗಳಿಂದ ತೊಂದರೆ ಕೂಡ ಉಂಟಾಗುವ ಸಂಭವ ಇರುವುದರಿಂದ ಪ್ರತ್ಯೇಕ ವಿದ್ಯುತ್ ಫೀಡರ್ ಅಳವಡಿಕೆ ಮಾಡಬೇಕೆಂದು ಭಾಸ್ಕರ್ ನಾಯಕ್ ಮನವಿಯಲ್ಲಿ ತಿಳಿಸಿದ್ದಾರೆ.