ಕೂಡಿಗೆ, ಜೂ. ೧: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಳೆದ ೧೫ ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ, ಹಾರಂಗಿ ಮುಖ್ಯ ನಾಲೆಯ ಅಧುನೀಕರಣ ಕಾಮಗಾರಿಯು ಕೆಲ ದಿನಗಳವರೆಗೆ ಸ್ಥಗಿತಗೊಂಡಿತ್ತು. ಆದರೆ ಇದೀಗ ಮಳೆಯ ಪ್ರಮಾಣವು ಕಡಿಮೆಯಾದ ಹಿನ್ನೆಲೆಯಲ್ಲಿ ಸ್ಥಗಿತಗೊಂಡ ಕಾಮಗಾರಿಯು ಆರಂಭಗೊAಡಿದೆ ಎಂದು ಹಾರಂಗಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಇ. ಪುಟ್ಟಸ್ವಾಮಿ ತಿಳಿಸಿದ್ದಾರೆ.

ಇನ್ನೂ ಅನೇಕ ಕಾಮಗಾರಿಗಳು ನಡೆಯಬೇಕಾಗಿರುವುದರಿಂದಾಗಿ ಮುಂದಿನ ತಿಂಗಳುಗಳಲ್ಲಿ ಬೇಸಾಯಕ್ಕೆ ನಾಲೆಯ ಮೂಲಕ ನೀರು ಹರಿಸುವುದರ ಬಗ್ಗೆ ಈ ಅಚ್ಚುಕಟ್ಟು ವ್ಯಾಪ್ತಿಯ ರೈತರಲ್ಲಿ ಆತಂಕ ಮೂಡಿದೆ.

ಕಾಮಗಾರಿಯು ಈಗಾಗಲೇ ಶೇ. ೭೦ ರಷ್ಟು ಮುಕ್ತಾಯಗೊಂಡಿದೆ. ಮುಂದಿನ ದಿನಗಳಲ್ಲಿ ಬಾಕಿ ಇರುವ ಕಾಮಗಾರಿಯನ್ನು ಮಳೆಯ ಪ್ರಮಾಣವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಪೂರ್ಣಗೊಳಿಸಲಾಗುವುದು. ಅಲ್ಲದೆ ಹಾರಂಗಿ ಅಣೆಕಟ್ಟೆಯಿಂದ ಮೂರು ಜಿಲ್ಲೆಗಳ ರೈತರ ಬೇಸಾಯಕ್ಕೆ ಅಣೆಕಟ್ಟೆಯ ನೀರಿನ ಸಂಗ್ರಹದ ಮಟ್ಟದ ಆಧಾರದ ಮೇಲೆ ಮತ್ತು ರಾಜ್ಯ ಸರ್ಕಾರದ ಸೂಚನೆಯಂತೆ ಮೈಸೂರು, ಹಾಸನ, ಕೊಡಗು ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶ ರೈತರ ಬೇಸಾಯಕ್ಕೆ ಯಾವುದೇ ರೀತಿಯಲ್ಲಿ ತೊಂದರೆಗಳು ಆಗುವುದಿಲ್ಲ, ಮುಂದಿನ ಸಾಲಿನ ಬೇಸಾಯಕ್ಕೆ ಹಾರಂಗಿ ನಾಲೆಯಿಂದ ಕಾವೇರಿ ನೀರಾವರಿ ನಿಗಮದ ಸೂಚನೆಯಂತೆ ರೈತರ ಬೇಸಾಯಕ್ಕೆ ನಾಲೆಯ ಮೂಲಕ ನೀರನ್ನು ಹರಿಸಲಾಗುವುದು. ರೈತರು ಆತಂಕ ಪಡುವಂತ್ತಿಲ್ಲ ಎಂದು ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಇ. ಪುಟ್ಟಸ್ವಾಮಿ ತಿಳಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ