ವೀರಾಜಪೇಟೆ, ಜೂ. ೧: ವಿವಿಧ ವೇಷಭೂಷಣ ತೊಟ್ಟು ಸಂಭ್ರಮಿಸಿದ ಗ್ರಾಮವಾಸಿಗಳ ಹರ್ಷೋದ್ಘಾರದೊಂದಿಗೆ ೨ ದಿನಗಳ ಕಾಲ ನಡೆದ ಐತಿಹಾಸಿಕ ಪಾರಣ ಬೋಡ್ ನಮ್ಮೆಗೆ ಶನಿವಾರ ಸಂಜೆ ವರ್ಣರಂಜಿತವಾಗಿ ತೆರೆಬಿತ್ತು.

ಪಾರಣ ಬೇಡು ಹಬ್ಬವನ್ನು ಬೇರಳಿನಾಡಿನ ಗ್ರಾಮಸ್ಥರು ಅದ್ದೂರಿಯಾಗಿ ಆಚರಿಸುವ ಮೂಲಕ ದಕ್ಷಿಣ ಕೊಡಗಿನ ಕೊನೆಯ ಬೇಡುಹಬ್ಬ ಮುಕ್ತಾಯಗೊಂಡಿತು.

ಮೇ ೨೬ರಂದು ಹಬ್ಬಕ್ಕೆ ಕಟ್ಟು ಬೀಳುವ ಮೂಲಕ ವಿವಿಧ ಕಟ್ಟುಪಾಡುಗಳಿಗೆ ಚಾಲನೆ ದೊರೆತ ಪಾರಣ ನಮ್ಮೆಯಲ್ಲಿ ಅಬಾಲವೃದ್ಧರಾಗಿ ಉತ್ಸಾಹದಿಂದ ಪಾಲ್ಗೊಂಡಿದ್ದ ಅಸಂಖ್ಯಾತ ಗ್ರಾಮಸ್ಥರು ಎರಡು ದಿನ ಪೂರ್ತಿ ಹಬ್ಬದಲ್ಲೇ ತಲ್ಲೀನರಾಗಿದ್ದರು. ಇತಿಹಾಸ ಪ್ರಸಿದ್ಧ ಪಾರಣ ಬೇಡುಹಬ್ಬವನ್ನು ಸಾಕ್ಷೀಕರಿಸಲು ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಜನರು ಬೇರಳಿನಾಡಿಗೆ ಬಂದಿದ್ದರು.

`ಕಳಿ' ತಂಡಗಳೊAದಿಗೆ ೪ ಡೋಲುಗಳನ್ನು ಹೊತ್ತು ಅವುಗಳನ್ನು ಬಾರಿಸುತ್ತ ಪಾರಣ ಹಾಡುಗಳನ್ನು ಹಾಡುತ್ತಾ ಮನೆ ಮನೆಗೆ ತೆರಳಿದ ವೇಷಧಾರಿಗಳು ಬೇಡುಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದರು. ಇವರೊಂದಿಗೆ ಕೊಡಗಿನ ಎರವ ಜನಾಂಗದ ಕಲಾವಿದರ ಸಾಂಪ್ರದಾಯಿಕ ಚೀನಿ ಮತ್ತು ದುಡಿ ತಂಡ ಚೀನಿವಾದ್ಯದ ಮೂಲಕ ವೇಷಧಾರಿಗಳನ್ನು ಹಿಂಬಾಲಿಸುತ್ತಿದ್ದ ದೃಶ್ಯ ಪಾರಣ ಬೇಡು ಹಬ್ಬಕ್ಕೆ ರಂಗು ನೀಡಿತು.

ಶನಿವಾರ ಸಂಜೆ ವೇಳೆಗೆ ಕಂಡAಗಾಲ ಗ್ರಾಮದಲ್ಲಿರುವ ಪಾರಣಮಾನಿಯಲ್ಲಿ ಜಮಾಯಿಸಿದ ಸಾವಿರಾರು ಸಂಖ್ಯೆಯ ಗ್ರಾಮವಾಸಿಗಳು ಕೆಸರಿನಲ್ಲಿ ಮಿಂದೆದ್ದರು. ಅಂತಿಮವಾಗಿ ಕೊಡವರ ಪ್ರಸಿದ್ದ ನಾಣ್ನುಡಿಯಾದ ಕುಂದತ್ ಬೊಟ್ಟ್÷್ಲ ನೇಂದ ಕುದುರೆ, ಪಾರಣಮಾನಿಲ್ ಅಳ್‌ಂಜ ಕುದುರೆ ಎಂಬAತೆ ಪಾರಣ ಬೇಡುಹಬ್ಬದಲ್ಲಿ ಸಾಂಪ್ರದಾಯಿಕವಾಗಿ ಬಿದಿರಿನಿಂದ ತಯಾರಿಸಲಾದ ೨ ಆನೆ ಮತ್ತು ೩ ಕುದುರೆಯಾಕೃತಿಯನ್ನು ಪಾರಣಮಾನಿಯಲ್ಲಿ ಕಡಿಯುವುದರ ಮೂಲಕ ದಕ್ಷಿಣ ಕೊಡಗಿನ ಐತಿಹಾಸಿಕ ಕೊನೆಯ ಬೇಡು ಹಬ್ಬಕ್ಕೆ ಮಂಗಳ ಹಾಡಲಾಯಿತು.

ದಕ್ಷಿಣ ಕೊಡಗಿನ ೯ ಕೇರಿಗಳನ್ನು ಒಳಗೊಂಡಿರುವ ಇಡೀ ಬೇರಳಿನಾಡಿನಲ್ಲಿ ಪಾರಣ ನಮ್ಮೆಯ ಅಂಗವಾಗಿ ೨ ದಿನಗಳ ಕಾಲ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ವರ್ಷಕ್ಕೊಮ್ಮೆ ನಡೆಯುವ ಈ ವಿಶಿಷ್ಟ ಹಬ್ಬದಂದು ದೇಶದ ಯಾವುದೇ ಭಾಗದಲ್ಲಿದ್ದರೂ ಬೇರಳಿನಾಡಿನ ನಿವಾಸಿಗಳು ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಅಭಿಮಾನದಿಂದ ಈ ಹಬ್ಬದಲ್ಲಿ ಪಾಲ್ಗೊಳ್ಳುವುದು ವಾಡಿಕೆಯಾಗಿದೆ. ಬೆಳಿಗ್ಗಿನಿಂದಲೇ ಬೇರಳಿನಾಡಿನ ೯ ಕೇರಿಗಳಲ್ಲಿ ಪಾರಣಮಾನಿ ಹಬ್ಬದ ಪ್ರತೀಕವಾಗಿ ವಿವಿಧ

(ಮೊದಲ ಪುಟದಿಂದ) ವೇಷಧಾರಿಗಳು ಅಲ್ಲಲ್ಲೇ ಗುಂಪಾಗಿ ಮನೆ ಮನೆಗಳಿಗೆ ಸಂಚರಿಸುವ ದೃಶ್ಯ ಈ ಭಾಗದಲ್ಲಿ ಸಾಮಾನ್ಯವಾಗಿರುತ್ತದೆ. ಕೆಲವು ಗುಂಪುಗಳಲ್ಲಿ ಮಹಿಳೆಯರಂತೆ ವೇಷ ಧರಿಸಿದ್ದ ವೇಷಧಾರಿಗಳು ವಿಶೇಷವಾಗಿ ಗಮನ ಸೆಳೆಯುತ್ತಿದ್ದರು.

ಹಬ್ಬ ಆಚರಣೆ

ಹಬ್ಬಕ್ಕೆ ೫ ದಿನಗಳ ಮುಂಚಿತವಾಗಿ ಇಡೀ ಬೇರಳಿನಾಡಿನಲ್ಲಿ ಪಾರಣಮಾನಿ ಹಬ್ಬದ ಕಟ್ಟು ಬೀಳುತ್ತದೆ. ಕಾದ್ಯಾರ್ ೧೭ ರಂದು ಬೆಳಿಗ್ಗಿನ ಜಾವ ವಿವಿಧ ಕೇರಿನಾಡಿನ ಅಂಬಲದಲ್ಲಿ ಬಂದು ಸೇರುವ ಗ್ರಾಮವಾಸಿಗಳು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಅಲ್ಲಿನ ಜೋಡು ಭಗವತಿ ದೇವಸ್ಥಾನದಲ್ಲಿ ಬಂದು ಮತ್ತೊಂದು ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಬಳಿಕ ನಿರ್ದಿಷ್ಟ ಸಂಖ್ಯೆಯಲ್ಲಿ ಬೇರಳಿನಾಡಿನ ಕೆಲವರು ಕಂಜಿತAಡ ಕುಟುಂಬಸ್ಥರ ನೇತೃತ್ವದಲ್ಲಿ ಭಂಡಾರ, ಪೂಜೆ ಮತ್ತು ಅಡುಗೆ ಸಾಮಗ್ರಿಗಳನ್ನು ಹೊತ್ತು ಸುಮಾರು ೧೪ ಕಿ.ಮೀ ದೂರದ ಬೆಟ್ಟದಲ್ಲಿರುವ ಕಮ್ಮಟ್ಟ÷್ಮಲೆಗೆ ತೆರಳುತ್ತಾರೆ. ಕಮ್ಮಟ್ಟ÷್ಮಲೆಯಲ್ಲಿರುವ ಉದ್ಭವಲಿಂಗ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಾಮೂಹಿಕ ಭೋಜನ ಸ್ವೀಕರಿಸಿದ ಬಳಿಕ ಪುರೋಹಿತರು ಪಾರಣ ಪಾಟ್ಗೆ ಚಾಲನೆ ನೀಡಿ ಬೆಟ್ಟ ಇಳಿಯಲಾರಂಭಿಸುತ್ತಾರೆ. ಕಮ್ಮಟ್ಟ÷್ಮಲೆಯಿಂದ ಆಗಮಿಸಿದ ತಂಡ ಮತ್ತೆ ಅಂಬಲಗಳಲ್ಲಿ ಬಂದು ಸೇರುತ್ತದೆ.

ಈ ತಂಡ ಆಗಮಿಸಿದ ಬಳಿಕವಷ್ಟೇ ಪಾರಣಮಾನಿ ಹಬ್ಬಕ್ಕೆ ಚಾಲನೆ ದೊರೆಯುವುದು ಸಂಪ್ರದಾಯ. ನಂತರ ನಾಡಿನ ವಿವಿಧ ಗ್ರಾಮಗಳ ತಕ್ಕರುಗಳ ಮನೆಯಲ್ಲಿ ಕಳಿ (ವಿವಿಧ ವೇಷಧಾರಿಗಳ ಗುಂಪು ಕುಣಿತ) ಆರಂಭಗೊಳ್ಳುತ್ತದೆ. ಇದಕ್ಕೂ ಮೊದಲು ಕಾದ್ಯಾರ್ ೧೭ ರಂದು ಬೆಳಿಗ್ಗೆ ಗ್ರಾಮವಾಸಿಗಳ ಮತ್ತೊಂದು ತಂಡ ಬಾಡಗದ ಬಿದಿರು ಕಾಡಿಗೆ ತೆರಳಿ ಕೃತಕ ಆನೆ ಮತ್ತು ಕುದುರೆಯಾಕೃತಿಗೆ ಅಗತ್ಯವಿರುವ ಹಸಿ ಬಿದಿರನ್ನು ತಂದು ಸಿದ್ಧತೆ ಮಾಡಿಕೊಳ್ಳುತ್ತದೆ. ಬೇಡು ಹಬ್ಬದ ಭಾಗವಾಗಿ ನಾಡಿನಲ್ಲಿರುವ ಭದ್ರಕಾಳಿ ದೇವಸ್ಥಾನದಲ್ಲಿ ಬೆಳಿಗ್ಗೆ ಸಾಂಪ್ರದಾಯಿಕವಾದ ವಿಧಿವಿಧಾನವನ್ನು ಪೂರೈಸಲಾಗುತ್ತದೆ. ಹಿಂದಿನ ದಿನ ರಾತ್ರಿಯಿಂದಲೇ ಬೇರಳಿನಾಡಿನ ಪ್ರತೀ ಮನೆ ಮನೆಗಳಿಗೆ ತೆರಳುವ ವಿವಿಧ ಕೇರಿಗಳ ವೇಷಧಾರಿಗಳ ಗುಂಪು ಪದ್ದತಿಯನ್ನು ಪೂರ್ಣಗೊಳಿಸುತ್ತದೆ. ಬೇರಳಿನಾಡಿಗೆ ಸಂಬAಧಿಸಿದ ಗ್ರಾಮಗಳಲ್ಲಿರುವ ಆಯಾ ಕುಟುಂಬಸ್ಥರ ಐನ್‌ಮನೆಗಳಿಗೆ ವೇಷಧಾರಿಗಳ ತಂಡ ತೆರಳುವುದು ಕಡ್ಡಾಯ ವಾಡಿಕೆವಾಗಿದೆ. ಹಬ್ಬದ ೨ನೇ ದಿನದಂದೂ ಬೆಳಿಗ್ಗೆಯಿಂದಲೇ ಕಳಿ ಮುಂದುವರಿಯುತ್ತದೆ.

ಎರವರ ಚೀನಿ ದುಡಿಗೆ ಪ್ರಾಶಸ್ತö್ಯ: ಕೊಡಗಿನಾದ್ಯಂತ ಎರವರ ಚೀನಿ ದುಡಿ ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಪಾರಣ ಬೇಡು ಹಬ್ಬದಲ್ಲಿ ಎರವರ ಚೀನಿ ದುಡಿಗೆ ಹೆಚ್ಚಿನ ಪ್ರಾಶಸ್ತ÷್ಯ ನೀಡುತ್ತಿರುವುದು ಇಲ್ಲಿ ಮೊದಲಿನಿಂದಲೂ ಚಾಲ್ತಿಯಲ್ಲಿದೆ.

ಸಂಭ್ರಮದ ತೆರೆ:

ನಾಡಿನ ಮನೆ ಮನೆಗಳಿಗೆ ತೆರಳುವ ಕಳಿ ತಂಡ ಸಂಜೆ ವೇಳೆಗೆ ಅಂಬಲಕ್ಕೆ ಬಂದು ಸೇರುತ್ತದೆ. ಈ ವೇಳೆ ಅಪಾರ ಸಂಖ್ಯೆಯಲ್ಲಿ ಜಮಾವಣೆಗೊಳ್ಳುವ ಗ್ರಾಮವಾಸಿಗಳು ಮತ್ತು ವೇಷಧಾರಿಗಳ ತಂಡ ಸ್ಥಳದಲ್ಲಿ ಅದ್ಭುತವಾದ ಮನೊರಂಜನಾ ಲೋಕವನ್ನೇ ಸೃಷ್ಟಿಸುತ್ತದೆ. ಕಳಿ ಆರಂಭಗೊAಡ ತಕ್ಕರುಗಳ ಮನೆಯಲ್ಲೇ ಕಳಿ ಅಂತ್ಯವಾಗುತ್ತದೆ. ಬಳಿಕ ಕೋಡಂಗಿದಾಸ ಮತ್ತು ಪಾಲೆಕರುಂಬ ಎಂಬ ವೇಷಧಾರಿಗಳೊಡನೆ ಪಾರಣಮಾನಿಗೆ ಬಂದು ಸೇರುವ ಭಾರಿ ಸಂಖ್ಯೆಯ ಜನತೆ ಗ್ರಾಮವಾಸಿಗಳು ಗ್ರಾಮದ ಮನೆಗಳಿಂದ ಸಂಗ್ರಹಿಸಲಾದ ಸಿಂಬಿಗಳನ್ನು ಮಾನಿಗೆ ಎಸೆದ ಬಳಿಕ ಶೃಂಗಾರಗೊAಡು ಸಿದ್ದವಾಗಿರುವ ಕೃತಕ ೨ ಆನೆ ಮತ್ತು ೩ ಕುದುರೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಗುತ್ತದೆ.

ಅಲ್ಲಿಂದ ಮಾನಿಯ ಪಕ್ಕದಲ್ಲೇ ಇರುವ ಗದ್ದೆಯಲ್ಲಿ ಕುಣಿದು ಕುಪ್ಪಳಿಸುತ್ತ ಹಬ್ಬವನ್ನು ಸಂಭ್ರಮಿಸುತ್ತಾರೆ. ಅಲ್ಲಿ ಕೃತಕ ಆನೆ ಮತ್ತು ಕುದುರೆಯಾಕೃತಿಯನ್ನು ಕಡಿಯುವ ಮೂಲಕ ಪಾರಣ ಬೇಡು ಹಬ್ಬಕ್ಕೆ ಅಂತಿಮ ತೆರೆ ಎಳೆಯಲಾಯಿತು.