ಚೆಯ್ಯಂಡಾಣೆ, ಜೂ. ೨: ಇತ್ತೀಚಿನ ವರ್ಷಗಳಲ್ಲಿ ಸರಕಾರಿ ಶಾಲೆಗಳೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ ಎಂದು ಗುಂಡಿಗೆರೆಯ ಬೇಟೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸೀತಾ ಅಭಿಪ್ರಾಯಪಟ್ಟರು. ಗುಂಡಿಗೆರೆಯ ಎಚ್.ಐ.ಜಿ ಫ್ಯೂಚರ್ ದುಬೈ ಸಂಘಟನೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಇಂದಿನ ಕಾಲಘಟ್ಟದಲ್ಲಿ ಪೋಷಕರು ತಮ್ಮ ಮಕ್ಕಳ ಭವಿಷ್ಯದ ಕುರಿತು ಚಿಂತಿಸದೆ ನನ್ನ ನೆರೆಮನೆಯ ಮಕ್ಕಳು ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ದೊಡ್ಡ ದೊಡ್ಡ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಾರೆ. ಇದಕ್ಕೆ ವಿರುದ್ಧವಾಗಿ ಮತ್ತೊಬ್ಬರು ಅದಕ್ಕಿಂತ ಹೆಚ್ಚು ಹಣ ಖರ್ಚು ಮಾಡಿ ಬೇರೊಂದು ಶಾಲೆಗೆ ಕಳುಹಿಸುವಂತಾಗಿದೆ ಇದರಿಂದ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಉಪಾಧ್ಯಕ್ಷ ಮುಸ್ತಫಾ ವಹಿಸಿದ್ದರು. ಅತ್ಯಧಿಕ ಅಂಕಪಡೆದ ವಿದ್ಯಾರ್ಥಿಗಳಾದ ಸಮ್ನತ್ ಎಂ.ಐ, ಫಾತಿಮತ್ ಸಮ್ನ ಎಂ.ಎ, ತಸ್ಲೀಮ ಸಿ.ಎಂ. ಹಾಗೂ ವಾಲಿಬಾಲ್ ಪಂದ್ಯಾಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಆಸಿಫಾ ಎಂ.ಎಚ್ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭ ಗುಂಡಿಗೆರೆ ಜಮಾಅತ್ ಅಧ್ಯಕ್ಷ ಮುಹಮ್ಮದ್ ಹಾಜಿ, ಉಪಾಧ್ಯಕ್ಷ ಆಲಿ, ಮಾಜಿ ಅಧ್ಯಕ್ಷ ಅಬ್ಬಾಸ್, ತಕ್ಕ ಮುಖ್ಯಸ್ಥ ಶಾದುಲಿ, ಗ್ರಾ.ಪಂ. ಸದಸ್ಯ ರಝಾಕ್, ಉಮ್ಮರ್ ಹಾಜಿ, ಉಸ್ಮಾನ್ ಹಾಜಿ, ಮೊಯ್ದು ಕುಂಞ, ಮೊಯ್ದು, ಎಚ್‌ಐಜಿ ಫ್ಯೂಚರ್ ಸಂಘಟನೆಯ ಶಫೀಕ್, ಕಾರ್ಯದರ್ಶಿ ಲತೀಫ್, ಮಾಜಿ ಅಧ್ಯಕ್ಷ ನಿಝಾರ್, ಸಲೀಂ, ಹುಸೈನ್, ಹನೀಫಾ, ಅಬಿದ್, ಆಲಿ, ನಾಸರ್, ಅಲ್ತಾಫ್, ಮೊಯ್ದು, ಇಕ್ಬಾಲ್, ಶಕೀಲ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.