ಸುಂಟಿಕೊಪ್ಪ, ಜೂ. ೩ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕಾನ್‌ಬೈಲ್ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ತಲಕಾವೇರಿ ಜ್ಞಾನ ವಿಕಾಸ ತಂಡದ ವತಿಯಿಂದ ಸಾಮಾಜಿಕ ಅರಿವು ಕುರಿತು ಬೀದಿ ನಾಟಕವನ್ನು ನಡೆಸಿ ಸಾರ್ವಜನಿಕರಿಗೆ ಆರಿವು ಮೂಡಿಸಲಾಯಿತು.

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಜಿಕೆರೆ ಸಮುದಾಯ ಭವನದಲ್ಲಿ ತಲಕಾವೇರಿ ಜ್ಞಾನವಿಕಾಸ ತಂಡದ ವತಿಯಿಂದ ಬೀದಿನಾಟಕದ ಮೂಲಕ ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸು ವುದು, ಅಪ್ರಾಪ್ತ ವಯಸ್ಕ ಮಕ್ಕಳಿಗೆ ವಿವಾಹ ನಡೆಸುವುದರಿಂದ ಮುಂದಾಗುವ ದುಷ್ಟರಿಣಾಮ, ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಆಗುತ್ತಿರುವ ಹಾನಿ ಹಾಗೂ ತಮ್ಮ ಸುತ್ತಮುತ್ತಲಿನಲ್ಲಿ ಹಸಿರು ಪರಿಸರವನ್ನು ಸಂರಕ್ಷಿಸುವ ವಿಚಾರದ ಕುರಿತು ಜಾಗೃತಿ ಮೂಡಿಸಲಾಯಿತು. ಉದ್ಘಾಟನೆಯನ್ನು ಗಾ.ಪಂ. ಕಾರ್ಯದರ್ಶಿ ಚಂದ್ರಶೇಖರ್ ನೆರವೇರಿಸಿದರು. ಸಮಾರಂಭದ ವೇದಿಕೆಯಲ್ಲಿ ಕಾನ್‌ಬೈಲ್ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಮೂರ್ತಿ, ಗ್ರಾ.ಪಂ. ಸದಸ್ಯೆ ಪ್ರೇಮಾ, ಜ್ಞಾನವಿಕಾಸ ಕೇಂದ್ರ ಸಮನ್ವಯ ಅಧಿಕಾರಿ ಮಾಲಿನಿ, ಒಕ್ಕೂಟದ ಅಧ್ಯಕ್ಷೆ ಖತೀಜಾ, ಸೇವಾ ಪ್ರತಿನಿಧಿ ಯಶೋಧ ಬಸವರಾಜ್ ಉಪಸ್ಥಿತರಿದ್ದರು. ಪ್ರೌಢಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಕಾನ್‌ಬೈಲ್ ಜ್ಞಾನವಿಕಾಸ ಕೇಂದ್ರದ ಸದಸ್ಯರುಗಳು ಉಪಸ್ಥಿತರಿದ್ದರು.