ಕುಶಾಲನಗರ, ಜೂ. ೪: ಕೊಡಗು ಅಂಚೆ ಇಲಾಖೆಯ ನೌಕರರ ಆಶ್ರಯದಲ್ಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ನಡೆಯಿತು.

ಕುಶಾಲನಗರ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯಾಟದಲ್ಲಿ ಕೊಡಗು ಜಿಲ್ಲೆಯ ಅಂಚೆ ವಿಭಾಗದ ಮೂರು ಉಪವಿಭಾಗ ಮತ್ತು ಪ್ರಧಾನ ಅಂಚೆ ಕಚೇರಿ ಸೇರಿದಂತೆ ಒಟ್ಟು ನಾಲ್ಕು ತಂಡಗಳು ಪಾಲ್ಗೊಂಡಿದ್ದವು. ಹಾಸನ ಅಂಚೆ ವಿಭಾಗದ ಉಪ ಅಧೀಕ್ಷಕ ಹೆಚ್. ಸೋಮಯ್ಯ ಪಂದ್ಯಾಟಕ್ಕೆ ಚಾಲನೆ ನೀಡಿದರು. ಮಡಿಕೇರಿ ಅಂಚೆ ನಿರೀಕ್ಷಕ ಬಿ.ಡಿ. ಮಂಜುನಾಥ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಸೋಮವಾರಪೇಟೆ ಉಪ ವಿಭಾಗ ಮತ್ತು ಮಡಿಕೇರಿ ಉಪ ವಿಭಾಗಗಳ ನಡುವೆ ಫೈನಲ್ ಪಂದ್ಯಾವಳಿ ನಡೆದು ಸೋಮವಾರಪೇಟೆ ಉಪ ವಿಭಾಗ ತಂಡ ಜಯಗಳಿಸಿತು.

ಪಂದ್ಯ ಪುರುಷೋತ್ತಮರಾಗಿ ಶಿವಕುಮಾರ್, ಉತ್ತಮ ತಂಡವಾಗಿ ಮಡಿಕೇರಿ ಉಪ ವಿಭಾಗ ಪ್ರಶಸ್ತಿ ಪಡೆದುಕೊಂಡಿತು.

ಪಂದ್ಯಾವಳಿಯಲ್ಲಿ ಮಡಿಕೇರಿ ಪ್ರಧಾನ ಕಚೇರಿಯ ಪ್ರಮುಖರಾದ ಬೇಬಿ ಜೋಸೆಫ್, ಸಿ.ಎಲ್. ಮಹೇಶ್, ಸಂದೀಪ್, ಸೋಮಪ್ಪ, ವೀರಾಜಪೇಟೆ ಉಪವಿಭಾಗದ ಮಂಜು, ಶಫೀರ್, ಸತ್ಯ ಪ್ರಸನ್ನ, ಸೋಮವಾರಪೇಟೆ ಉಪವಿಭಾಗದ ಉಪ ಅಧೀಕ್ಷಕ ಶಿವಕುಮಾರ್, ಅಶೋಕ್, ಎಂ.ಎಸ್. ಮಂಜುನಾಥ್, ಭಾಸ್ಕರ್ ಗಾಡ್ವಿನ್, ಮನೋಜ್, ಮತ್ತಿತರರು ಇದ್ದರು.