ವೀರಾಜಪೇಟೆ, ಜೂ. ೪: ಜಂಕ್ ಫುಡ್‌ಗಳನ್ನು ದೂರವಿಟ್ಟು ಸ್ವಾಭಾವಿಕವಾಗಿ ಸಿಗುವ ತರಕಾರಿ ಕಾಯಿಪಲ್ಯೆಗಳನ್ನು ಸೇವಿಸಿ ಉತ್ತಮ ಆರೋಗ್ಯವಂತರಾಗಬಹುದು ಎಂದು ಮಹಿಳಾ ಸಾಹಿತಿ ಹಾಗೂ ಬರಹಗಾರ್ತಿ ಚೆಟ್ಟಳ್ಳಿಯ ಆಶಾ ತಿಮ್ಮಪ್ಪಯ್ಯ ಹೇಳಿದರು. ಅರಮೇರಿ ಕಳಂಚೇರಿ ಮಠದ ಲಿಂಗರಾಜೇAದ್ರ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹೊಂಬೆಳಕು ಮಾಸಿಕ ತತ್ವ ಚಿಂತನಾ ಗೋಷ್ಠಿ ಕಾರ್ಯಕ್ರಮದಲ್ಲಿ ಉತ್ತಮ ಆಹಾರದ ಮೂಲಮಂತ್ರಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು ವ್ಯಾಪಾರೀಕರಣ ಇಂದು ವ್ಯಾಪಕವಾಗಿ ಹರಡಿರುವುದು, ಜಾಹೀರಾತುಗಳಿಗೆ ಮಾರುಹೋಗಿ ಬೇಡದ ತಿನಿಸುಗಳನ್ನು ತಿನ್ನುವುದು ತಪ್ಪಬೇಕು. ಪ್ರಕೃತಿಯು ಕಾಲಕಾಲಕ್ಕೆ ನಮಗೆ ಪೂರೈಸುವ ಎಲ್ಲಾ ರೀತಿಯ ಹಣ್ಣುಗಳನ್ನು ನಾವು ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದಬಹುದಾಗಿದೆ. ಹಾಗೆಯೇ ಕಣಿಲೆ, ಬಾಳೆ ದಿಂಡು, ಹಲಸು ಮೊದಲಾದ ತಿನಿಸುಗಳನ್ನು ಮಕ್ಕಳಿಗೆ ನೀಡುವ ಮೂಲಕ ಆರೋಗ್ಯವಂತರಾಗಿ ಮಾಡಬೇಕಿದೆ ಎಂದರು. ಸಂಪ್ರದಾಯ ಹಾಗೂ ಸಂಸ್ಕೃತಿಗಳಿಗೆ ಹೊಂದಿಕೆಯಾಗುವ ಸಾತ್ವಿಕವಾದ ಆಹಾರಗಳನ್ನು ತಯಾರಿಸುವಲ್ಲಿ ಮಹಿಳೆಯರು ಮಗ್ನರಾಗಬೇಕು ಎಂದು ಆಶಾ ತಿಮ್ಮಪ್ಪಯ್ಯ ಕರೆಯಿತ್ತರು. ಸಾನಿಧ್ಯ ವಹಿಸಿದ್ದ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಶರೀರ ಸದೃಢವಾಗಿರಲು ಆಹಾರದ ಪಾತ್ರ ಬಹಳ ಮುಖ್ಯ. ಪೋಷಕರು ತಮ್ಮ ಮಕ್ಕಳಿಗೆ ಹೊಲ-ಗದ್ದೆ, ತೋಟದ ಕೃಷಿಯ ಅನುಭವ ಕಲಿಸದೆ ಬೆಳೆಸುತ್ತಿರುವುದು ವಿಷಾದನೀಯ ಎಂದು ಹೇಳಿದರು. ಪಕ್ಷಿ ತಜ್ಞ ವೀರಾಜಪೇಟೆಯ ಡಾ. ನರಸಿಂಹನ್ ಅಡುಗೆ ಮನೆಯಿಂದ ಸಕ್ಕರೆಯನ್ನು ಮಹಿಳೆಯರು ಮೊದಲು ದೂರವಿಡಬೇಕು. ತಿನಿಸುಗಳಲ್ಲಿ ಟೇಸ್ಟಿಂಗ್ ಪೌಡರ್ ಮುಂತಾದವುಗಳನ್ನು ಬಳಸದೆ ಸಸ್ಯ ಜನ್ಯ ಎಣ್ಣೆಗಳನ್ನು ಬಳಸುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕೆAದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಾಹಿತಿ ಕಿಗ್ಗಾಲು ಗಿರೀಶ್, ನಿವೃತ್ತ ಮೇಜರ್ ಗಿರಿ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ಬಿ. ನಟರಾಜು, ನಿರ್ದೇಶಕ ಪರಮೇಶ್ ಇದ್ದರು.