ಸುಂಟಿಕೊಪ್ಪ, ಜೂ. ೭: ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ನೂತನ ಧರ್ಮಗುರುಗಳಾಗಿ ರೆ.ಫಾ. ವಿಜಯ ಕುಮಾರ್ ಅಧಿಕಾರ ವಹಿಸಿಕೊಂಡರು. ಸಂತ ಅಂತೋಣಿ ದೇವಾಲಯದಲ್ಲಿ ಮಡಿಕೇರಿ ವಲಯ ಗುರುಗಳು ಹಾಗೂ ಸಂತ ಮೈಕಲರ ದೇವಾಲಯದ ಧರ್ಮಗುರುಗಳಾದ ರೆ.ಫಾ. ಜಾರ್ಜ್ ದೀಪಕ್ ಹಾಗೂ ಸೋಮವಾರಪೇಟೆ ಜಯವೀರ ಮಾತೆ ದೇವಾಲಯದ ಧರ್ಮಗುರು ಅವಿನಾಶ್ ಅವರುಗಳು ದಿವ್ಯ ಬಲಿಪೂಜೆಯನ್ನು ಸಮರ್ಪಿಸಿದರು.

ಇತ್ತೀಚೆಗೆ ಸಂತ ಅಂತೋಣಿ ದೇವಾಲಯದಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ಫಾ. ಅರುಳ್ ಸೆಲ್ವಕುಮಾರ್ ವರ್ಗಾವಣೆಗೊಂಡಿದ್ದು ತೆರವಾದ ಸ್ಥಾನಕ್ಕೆ ಮೈಸೂರು ಸಂತ ಜೋಸೆಫರ ದೇವಾಲಯದಲ್ಲಿ ಧರ್ಮಗುರುಗಳಾಗಿದ್ದ ರೆ.ಫಾ. ವಿಜಯಕುಮಾರ್ ಅವರನ್ನು ನೇಮಿಸಲಾಗಿದ್ದು, ರೆ.ಫಾ. ಜಾರ್ಜ್ ದೀಪಕ್ ಅವರು ನೂತನ ಧರ್ಮಗುರುಗಳಿಗೆ ಅಧಿಕಾರ ಹಸ್ತಾಂತರಿಸಿದರು.

ಸಮಾರಂಭವನ್ನು ಉದ್ದೇಶಿಸಿ ಜಾರ್ಜ್ ದೀಪಕ್ ಮಾತನಾಡಿ, ವಿಜಯ ಕುಮಾರ್ ಅವರ ಸೇವೆಯಿಂದ ಈ ದೇವಾಲಯವು ಮತ್ತಷ್ಟು ಏಳಿಗೆ ಸಾಧಿಸಲಿ ಎಂದರು. ರೆ.ಫಾ. ವಿಜಯಕುಮಾರ್ ಅಧಿಕಾರ ವಹಿಸಿಕೊಂಡು ಮಾತನಾಡಿ, ಭಕ್ತಾದಿಗಳ ಪ್ರೀತಿ, ವಿಶ್ವಾಸ, ಸಲಹೆ ಸಹಕಾರಗಳನ್ನು ಪಡೆದು ಉತ್ತಮ ಸೇವೆಯನ್ನು ಸಲ್ಲಿಸುವ ಆಶಯ ವ್ಯಕ್ತಪಡಿಸಿದರು.