ಸಿದ್ದಾಪುರ, ಜೂ. ೭: ಸಿ.ಐ.ಟಿ.ಯು. ಸಂಘಟನೆಯ ೫೫ನೇ ಸಂಸ್ಥಾಪನಾ ದಿನಾಚರಣೆಯನ್ನು ನೆಲ್ಲಿಹುದಿಕೇರಿ ಗ್ರಾಮದ ಸಂಘಟನೆಯ ಕಚೇರಿಯಲ್ಲಿ ಆಚರಿಸಲಾಯಿತು.

ಸಂಘಟನೆ ಪ್ರಮುಖರು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಿ.ಐ.ಟಿ.ಯು. ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಮಾತನಾಡಿ, ಸಿ.ಐ.ಟಿ.ಯು. ಸಂಘಟನೆಯು ಕಾರ್ಮಿಕ ವರ್ಗದ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಇದಲ್ಲದೆ ಜಾಗತೀಕರಣ, ಉದಾರೀಕರಣದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಾ ಬರುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಿಐಟಿಯು ಸಂಘಟನೆಯ ಪ್ರಮುಖರಾದ ಎ.ಸಿ. ಸಾಬು, ಹೆಚ್.ಬಿ. ರಮೇಶ್, ಸಾಜಿ ರಮೇಶ್, ಮಾದೇವ್, ಪುಷ್ಪ ಇನ್ನಿತರರು ಹಾಜರಿದ್ದರು.