ಮಾದಾಪುರ, ಜೂ. ೭: ಸಮೀಪದ ಹಟ್ಟಿಹೊಳೆಯಲ್ಲಿ ನಡೆದ ಮೊದಲನೇ ವರ್ಷದ ಹಟ್ಟಿಹೊಳೆ ಕ್ರಿಕೆಟ್ ಲೀಗ್ನಲ್ಲಿ ಟೀಮ್ ರ್ಯಾಬಿಟ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಹಟ್ಟಿ ಕ್ರಿಕೆರ್ಸ್ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಐದು ಓವರ್ಗಳ ಪಂದ್ಯಾಟದಲ್ಲಿ ಟಾಸ್ ಗೆದ್ದ ಟೀಮ್ ರ್ಯಾಬಿಟ್ ತಂಡ ಬೌಲಿಂಗ್ ಆಯ್ಕೆ ಮಾಡಿತು. ಮೊದಲು ಬ್ಯಾಟ್ ಮಾಡಿದ ಹಟ್ಟಿ ಕ್ರಿಕೆರ್ಸ್ ಐದು ಓವರ್ಗಳಲ್ಲಿ ಕೇವಲ ೨೬ ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಗುರಿಯನ್ನು ಬೆನ್ನಟ್ಟಿದ ಟೀಮ್ ರ್ಯಾಬಿಟ್ ತಂಡ ೪.೧ ಓವರ್ಗಳಲ್ಲಿ ಗೆಲುವಿನ ದಡ ಸೇರಿತು. ಪಂದ್ಯಾಟದ ಮ್ಯಾನ್ ಆಫ್ದ ಮ್ಯಾಚ್ ಅನ್ನು ಶ್ರೀ (ಚೀಯ), ಬೆಸ್ಟ್ ಬೌಲರ್ ಆಗಿ ಕುಟ್ಟಪ್ಪ, ಸರಣಿ ಪುರುಷೋತ್ತಮ ಮತ್ತು ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಜೀವನ್ ಪಡೆದುಕೊಂಡರು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಗವತಿ ಎಸ್ಟೇಟ್ನ ನಿರ್ದೇಶಕ ಡಾ. ರಾಜ ವಿಜಯ್ ಕುಮಾರ್, ಹಟ್ಟಿಹೊಳೆ ಧರ್ಮ ಕೇಂದ್ರದ ಧರ್ಮಗುರುಗಳು ಹಾಗೂ ನಿರ್ಮಲ ವಿದ್ಯಾಭವನದ ವ್ಯವಸ್ಥಾಪಕರು ಆಗಿರುವ ರೆ.ಫಾ. ಗಿಲ್ಬರ್ಟ್ ಡಿಸಿಲ್ವಾ ಪಾಲ್ಗೊಂಡು ಮಾತನಾಡಿದರು. ವೇದಿಕೆಯಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಭಾಸ್ಕರ್ ಎನ್., ಐವನ್ ಡಿಸೋಜ, ವಿಜಯ, ರತೀಶ್, ಕುಟ್ಟಪ್ಪ, ಪ್ರಸಾದ್ ಇತರರು ಇದ್ದರು.