ಕುಶಾಲನಗರ, ಜೂ. ೮: ವಾಹನ ಸವಾರರು, ಪಾದಾಚಾರಿಗಳು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಆರ್.ವಿ. ಗಂಗಾಧರಪ್ಪ ಕಿವಿಮಾತು ಹೇಳಿದರು.

ಕುಶಾಲನಗರ ಪಟ್ಟಣ ಸುತ್ತಮುತ್ತ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸುವ ಮೂಲಕ ವಾಹನ ಚಲಾಯಿಸುತ್ತಿದ್ದ ಸವಾರರನ್ನು ಪತ್ತೆಹಚ್ಚಿ ಅವರಿಗೆ ಪೊಲೀಸ್ ವಿಶ್ರಾಂತಿ ಗೃಹದಲ್ಲಿ ವಿಶೇಷ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಾಹನ ಸವಾರರು ತಮ್ಮ ಅಮೂಲ್ಯವಾದ ಜೀವಕ್ಕೆ ಬೆಲೆ ನೀಡಬೇಕು. ಜೊತೆಗೆ ಪಾದಚಾರಿಗಳು ಸೇರಿದಂತೆ ಇತರರ ಜೀವಕ್ಕೂ ರಕ್ಷಣೆ ನೀಡುವುದು ಜವಾಬ್ದಾರಿಯಾಗಿದೆ.

ಈ ನಿಟ್ಟಿನಲ್ಲಿ ಸಂಚಾರಿ ನಿಯಮ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು. ತಪ್ಪಿದಲ್ಲಿ ಕಾನೂನಿನ ಅನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹೆಲ್ಮೆಟ್ ಧರಿಸದೆ, ಸಂಚಾರಿ ನಿಯಮ ಪಾಲಿಸದ ಸವಾರರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡ ಪೊಲೀಸರು, ಸವಾರರಿಗೆ ವಿಶೇಷ ಅರಿವು ಜಾಗೃತಿ ಮೂಡಿಸುವ ತರಗತಿಗಳನ್ನು ತೆಗೆದುಕೊಂಡರು. ನಿಯಮಾನುಸಾರ ದಂಡ ತೆರುವ ಮೂಲಕ ವಶಪಡಿಸಿ ಕೊಂಡಿರುವ ವಾಹನಗಳನ್ನು ಪಡೆಯಬಹುದು ಎಂದರು.

ಸAಚಾರಿ ನಿಯಮ ಉಲ್ಲಂಘನೆ, ಅಸುರಕ್ಷಿತ ವಾಹನ ಚಾಲನೆಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಪೋಷಕರು ಯಾವುದೇ ಸಂದರ್ಭ ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನು ನೀಡಿದಲ್ಲಿ ಕಾನೂನು ರೀತಿಯ ಕ್ರಮ ಮತ್ತು ಜೈಲುವಾಸದೊಂದಿಗೆ ನ್ಯಾಯಾ ಲಯದ ಮೂಲಕ ದಂಡ ವಿಧಿಸಲಾಗುತ್ತದೆ.

ಈಗಾಗಲೇ ಹಲವು ಪ್ರಕರಣಗಳು ನಡೆದಿರುವ ಬಗ್ಗೆ ಅವರುಗಳು ಮಾಹಿತಿ ಒದಗಿಸಿದರು.

ಕುಶಾಲನಗರ ಭಾಗದಲ್ಲಿ ಕುಶಾಲನಗರ ಸೇರಿದಂತೆ ಸುತ್ತಮುತ್ತ ಪೊಲೀಸರು ವಾಹನ ತಪಾಸಣೆಯಲ್ಲಿ ನಿರಂತರವಾಗಿ ತೊಡಗಿಸಿ ಕೊಳ್ಳಲಿದ್ದಾರೆ, ಈ ಸಂದರ್ಭ ಪೊಲೀಸರೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು ಎಂದು ಹೇಳಿದರು.

ಈ ಸಂದರ್ಭ ಪಟ್ಟಣ ಹಾಗೂ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಕಾಶ್, ರಾಜೇಶ್ ಕೋಟ್ಯಾನ್, ಠಾಣಾಧಿಕಾರಿಗಳಾದ ಕುಸುಮ, ಲೋಹಿತ್, ಉಮಾ ಮತ್ತು ಸಿಬ್ಬಂದಿ ಇದ್ದರು.