ಮಡಿಕೇರಿ, ಜೂ. ೧೦: ನಗರದಲ್ಲಿ ನೂತನವಾಗಿ ಆರಂಭಗೊAಡ ಬಾಡಿಗೆ ಬೈಕ್ ಸೇವೆಗೆ ಟ್ಯಾಕ್ಸಿ ಚಾಲಕರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು.

ನಗರದ ಅಜ್ಜಮಾಡ ದೇವಯ್ಯ ವೃತ್ತದ ಬಳಿ ನೂತನವಾಗಿ ಆರಂಭಗೊAಡ ಸಿಟಿ ರೆಂಟಲ್ ಬೈಕ್ಸ್ಗೆ ಮುತ್ತಿಗೆ ಹಾಕಲು ಯತ್ನಿಸಿದ ಸ್ಥಳೀಯ ಟ್ಯಾಕ್ಸಿ ಚಾಲಕರು ಪರ್ಯಾಯ ಸ್ಥಳಕ್ಕೆ ಸ್ಥಳಾಂತರವಾಗುವAತೆ ಒತ್ತಾಯಿಸಿದರು. ಈ ಸಂದರ್ಭ ರೆಂಟಲ್ ಬೈಕ್ ಸರ್ವಿಸ್ ಮಾಲೀಕರು ಹಾಗೂ ಟ್ಯಾಕ್ಸಿ ಚಾಲಕರ ನಡುವೆ ವಾಗ್ವಾದ ಉಂಟಾಗಿ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಸ್ಥಳಕ್ಕೆ ಪೊಲೀಸರು ಆಗಮಿಸಿ ಉಭಯ ಕಡೆಯವರನ್ನು ಸಮಾಧಾನಪಡಿಸಿ ಗಲಾಟೆ ನಿಲ್ಲಿಸಿದರು.

ಚಾಲಕರು ಈ ಬಗ್ಗೆ ನಗರಸಭೆ ಪೌರಾಯುಕ್ತ ವಿಜಯ ಅವರಿಗೆ ಮೊಬೈಲ್ ಕರೆ ಮಾಡುವ ಮೂಲಕ ಗಮನ ಸೆಳೆದು ಉದ್ಯಮಕ್ಕೆ ಪರವಾನಗಿ ನೀಡಿದಕ್ಕೆ ಅತೃಪ್ತಿ ವ್ಯಕ್ತಪಡಿಸಿದರು. ನಂತರ ಚಾಲಕರನ್ನು ಚರ್ಚೆಯ ಉದ್ದೇಶಕ್ಕೆ ಕಚೇರಿಗೆ ಬರುವಂತೆ ಅಧಿಕಾರಿ ತಿಳಿಸಿದರು.

ಪ್ರವಾಸಿ ಟ್ಯಾಕ್ಸಿ ಚಾಲಕ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ತೆಕ್ಕಡ ಸಂತು ಕಾರ್ಯಪ್ಪ ಮಾತನಾಡಿ, ಇಲ್ಲಿ ರೆಂಟಲ್ ಬೈಕ್ ಸರ್ವಿಸ್ ತೆರೆಯಲು ಮೊದಲೇ ವಿರೋಧಿಸಿ ನಗರಸಭೆ ಹಾಗೂ ಆರ್.ಟಿ.ಓ. ಅಧಿಕಾರಿಗಳ ಗಮನ ಸೆಳೆದು ಅನುಮತಿ ನೀಡದಂತೆ ಒತ್ತಾಯಿಸಿದ್ದೆವು. ಆದರೆ, ಅನುಮತಿ ನೀಡಲಾಗಿದೆ. ಇದು ಸರಿಯಲ್ಲ, ಟ್ಯಾಕ್ಸಿ ನಿಲ್ದಾಣವಿರುವ ಈ ಜಾಗದಲ್ಲಿ ಬಾಡಿಗೆಗೆ ವಾಹನ ನೀಡಲು ಅವಕಾಶ ನೀಡಬಾರದು. ಪುಟ್ಟ ಜಿಲ್ಲೆಯಾಗಿರುವ ಕೊಡಗಿನಲ್ಲಿ ಅಗತ್ಯಕ್ಕೆ ಮೀರಿ ಬಾಡಿಗೆಗೆ ವಾಹನಗಳು ಲಭ್ಯವಾಗುತ್ತಿವೆ. ಇದರಿಂದ ಚಾಲನೆ ವೃತ್ತಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಚಾಲಕರಿಗೆ ಸಂಕಷ್ಟ ಎದುರಾಗಿದೆ. ಈ ಬಗ್ಗೆ ಕ್ರಮವಹಿಸದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ರೆಂಟಲ್ ಬೈಕ್ ಸರ್ವಿಸ್‌ಗಳಲ್ಲಿ ಅಗತ್ಯ ಮಾರ್ಗಸೂಚಿಯ ಪಾಲನೆಯಾಗುತ್ತಿಲ್ಲ ಎಂದು ಆರೋಪಿಸಿದರು.

ರೆಂಟಲ್ ಬೈಕ್ ಸರ್ವಿಸ್‌ನ ಮಾಲೀಕರಾದ ಆಸೀಫ್ ಅಲಿ, ಶಫೀಕ್ ಮಾತನಾಡಿ, ಬೆಂಗಳೂರು, ಮಡಿಕೇರಿ ಆರ್.ಟಿ.ಓ. ಹಾಗೂ ಮಡಿಕೇರಿ ನಗರಸಭೆಯಿಂದ ೬ ತಿಂಗಳ ಹಿಂದೆಯೆ ಅನುಮತಿ ಪಡೆದು ಇದೀಗ ಮಳಿಗೆ ತೆರೆದಿದ್ದೇವೆ. ದಾಖಲೆಗಳೆಲ್ಲ ಕ್ರಮಬದ್ಧವಾಗಿವೆ. ಎಲ್ಲಾ ಲೈಸನ್ಸ್ಗಳನ್ನು ಪಡೆದುಕೊಂಡಿದ್ದೇವೆ. ಇದೀಗ ಚಾಲಕರು ಬೇರೆ ಕಡೆ ಮಳಿಗೆ ಸ್ಥಳಾಂತರಕ್ಕೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಪಾಲುದಾರರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.