*ಗೋಣಿಕೊಪ್ಪ, ಜೂ. ೧೧: ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ೩೦ನೇ ವಾರ್ಷಿಕ ಮಹಾಸಭೆ ಕೈಕೇರಿಯ ವಿಪ್ರ ಭವನ ಸಭಾಂಗಣದಲ್ಲಿ ನಡೆಯಿತು. ಸಂಘದ ಕಾರ್ಯಚಟುವಟಿಕೆ ಹಾಗೂ ಅಭಿವೃದ್ಧಿಯ ಬಗ್ಗೆ ಚರ್ಚೆಗಳ ಜೊತೆಗೆ ಬೆಳಿಗ್ಗೆ ಗಣಪತಿ ಹೋಮ, ಸತ್ಯನಾರಾಯಣ ಪೂಜೆ ನೆರವೇರಿತು.

ಸಂಘದ ಅಧ್ಯಕ್ಷ ರಾಘವೇಂದ್ರ ವೈಲಯರವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ಜರುಗಿತು.

ವಿಪ್ರ ಸಭಾಭವನ ಮುಂಭಾಗದಲ್ಲಿ ಮುಂದುವರಿದ ಕಾಮಗಾರಿಯಾಗಿ ಸುಸಜ್ಜಿತ ಸಭಾಭವನ ನಿರ್ಮಾಣಕ್ಕೆ ತೀರ್ಮಾನ ಕೈಗೊಳ್ಳಲಾಯಿತು. ದಾನಿಗಳ ಆರ್ಥಿಕ ನೆರವಿನೊಂದಿಗೆ ಮುಂದಿನ ಮಹಾಸಭೆಯೊಳಗೆ ಕಾಮಗಾರಿಯನ್ನು ಪೂರೈಸಬೇಕಾಗಿದೆ ಎಂದು ರಾಘವೇಂದ್ರ ಅವರು ತಿಳಿಸಿದರು.

ಸಭೆಯಲ್ಲಿ ಸಂಘದ ಮುಂದಿನ ಕಾರ್ಯ ಚಟುವಟಿಕೆ ಹಾಗೂ ಪ್ರಗತಿಯ ಬಗ್ಗೆ ಚರ್ಚೆ ನಡೆಯಿತು. ಕೊಡಗು ಜಿಲ್ಲಾ ವಿಪ್ರ ಯುವ ಸಂಘ ಕ್ಷೇಮಾಭಿವೃದ್ಧಿ ಸಂಘದೊAದಿಗೆ ವಿಲೀನಗೊಂಡು ವಿಪ್ರ ಸಭಾಭವನ ಕಟ್ಟಡ ನಿರ್ಮಾಣಕ್ಕೆ ೫ ಲಕ್ಷ ರೂಪಾಯಿ ನೀಡಿರುವುದನ್ನು ಖಜಾಂಚಿ ಪವನ್ ಸಭೆಗೆ ಮಾಹಿತಿ ನೀಡಿದರು. ಇದೇ ಸಂದರ್ಭ ತೆರವಾಗಿದ್ದ ಎರಡು ನಿರ್ದೇಶಕ ಸ್ಥಾನವನ್ನು ಮಹಾಸಭೆಯ ಒಪ್ಪಿಗೆಯಂತೆ ನೇಮಿಸಲು ತೀರ್ಮಾನಿಸಲಾಯಿತು.

ಎಸ್‌ಎಲ್‌ಸಿಯಿಂದ ಸ್ನಾತಕೋತ್ತರ ಪದವಿವರೆಗೆ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡ ಲಾಯಿತು. ಮಹಾಸಭೆಯ ಮೊದಲಿಗೆ ಪ್ರಭಾಕರ ನೆಲ್ಲಿತ್ತಾಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಮಂಡಿಸಿದರೆ, ಲೆಕ್ಕಪತ್ರವನ್ನು ಪವನ್ ಕಂಡಿಪಡಿತ್ತಾಯ ಸಭೆಗೆ ನೀಡಿದರು.