ಮಡಿಕೇರಿ, ಜೂ. ೧೨: ಅಪ್ರಾಪ್ತ ವಯಸ್ಸಿನ ಯುವಕ ವಾಹನ ಚಾಲನೆ ಮಾಡಿ ಅಪಘಾತ ಮಾಡಿದ ಪ್ರಕರಣ ಸಂಬAಧ ವಿಚಾರಣೆ ನಡೆಸಿದ ಸೋಮವಾರಪೇಟೆ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಪ್ರಕಟಿಸಿದೆ.

ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ದುಂಡಳ್ಳಿ ಸಮೀಪ ತಾ.೧ ರಂದು ರಾತ್ರಿ ೭.೧೫ ರ ಸುಮಾರಿಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಜಯಪ್ಪ ಎಂಬವರಿಗೆ ಅಪ್ರಾಪ್ತ ಯುವಕ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಗುದ್ದಿದೆ. ಇದರಿಂದ ಗಂಭೀರಗೊAಡಿದ್ದ ವ್ಯಕ್ತಿಯನ್ನು ಹಾಸನ ಆಸ್ಪತ್ರೆಗೆ ರವಾನಿಸಲಾಗಿತ್ತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಾ. ೨ ರಂದು ಮೃತಪಟ್ಟಿದ್ದರು.

ಈ ಪ್ರಕರಣದಲ್ಲಿ ಸಕಲೇಶಪುರ ತಾಲೂಕಿನ ಚಂಗಡಹಳ್ಳಿ ನಿವಾಸಿ ಯಶೋಧ ಹಾಗೂ ಕುಶಾಲ ಎಂಬವರ ಅಪ್ರಾಪ್ತ ವಯಸ್ಸಿನ ಪುತ್ರ ಸ್ಕೂಟಿಯನ್ನು ಚಲಾಯಿಸಿಕೊಂಡು ಅಪಘಾತಗೊಳಿಸಿರುವುದು ತನಿಖೆಯಿಂದ ತಿಳಿದು ಬಂದಿತ್ತು. ಈ ಹಿನ್ನೆಲೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ೨೭೯, ೩೪೦ (ಎ) ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ಅಪ್ರಾಪ್ತನಿಗೆ ವಾಹನ ನೀಡಿದ ಕಾರಣಕ್ಕೆ ತಾಯಿ ಯಶೋಧ ಹಾಗೂ ವಾಹನ ಚಲಾಯಿಸಿದ ಅಪ್ರಾಪ್ತನನ್ನು ವಶಕ್ಕೆ ಪಡೆದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿತ್ತು.

ಅನಂತರ ಸೋಮವಾರಪೇಟೆ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಇಬ್ಬರನ್ನು ಪೊಲೀಸರು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಕಾನೂನು ಸಂಘರ್ಷಕ್ಕೆ ಒಳಗಾದ ಅಪ್ರಾಪ್ತ ಬಾಲಕನಿಗೆ ೧೧ ದಿನಗಳ ಕಾಲ ಸುಧಾರಣೆ ಸಲುವಾಗಿ ಮೈಸೂರಿನ ಸರಕಾರಿ ವೀಕ್ಷಣಾಲಯಕ್ಕೆ ಕಳುಹಿಸುವಂತೆ ಆದೇಶ ನೀಡಿದ್ದಾರೆ. ತಾಯಿ ಯಶೋಧ ಜಾಮೀನಿನಡಿ ಬಿಡುಗಡೆಗೊಂಡಿದ್ದಾರೆ.