ಸಿದ್ದಾಪುರ, ಜೂ. ೧೪: ಪ್ರೇಯಸಿ ಸರಿಯಾಗಿ ಮಾತನಾಡುತ್ತಿಲ್ಲ ಎಂದು ಮನನೊಂದ ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲ್ಯಹುದಿಕೇರಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

ನೆಲ್ಯಹುದಿಕೇರಿ ಗ್ರಾಮದ ಶಾಲೆ ರಸ್ತೆಯ ನಿವಾಸಿಯಾಗಿರುವ ಜಾನ್ಸನ್ ಎ.ಜೆ. (೨೩) ಎಂಬ ಯುವಕ ಮೃತ ದುರ್ದೈವಿ. ಶಾಲೆ ರಸ್ತೆಯ ನಿವಾಸಿಯಾಗಿರುವ ಜೇಮ್ಸ್ ಎಂಬವರ ಮಗನಾದ ಜಾನ್ಸನ್ ಎ.ಜೆ. ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದನು ಎನ್ನಲಾಗಿದೆ. ಆಕೆಯು ಇತ್ತೀಚೆಗೆ ಈತನೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ ಎಂಬ ಕಾರಣಕ್ಕಾಗಿ ಜಾನ್ಸನ್ ಮನನೊಂದು ತಾ. ೧೩ ರಂದು ತಾನು ಮಲಗುತ್ತಿದ್ದ ಕೋಣೆಯಲ್ಲಿ ರಾತ್ರಿ ಊಟ ಮುಗಿಸಿದ ನಂತರ ಮಲಗಲು ತೆರಳಿದ್ದವನು ಫ್ಯಾನ್‌ಗೆ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ಯುವಕನು ವಿಪರೀತ ಮದ್ಯಪಾನ ಮಾಡುತ್ತಿದ್ದನು ಎಂದು ಆತನ ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ. ತಾ. ೧೪ ರಂದು ಕೋಣೆಯ ಬಾಗಿಲು ತೆರೆಯದ ಕಾರಣ ಬಾಗಿಲು ತೆರೆದು ನೋಡಿದಾಗ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದು ಬಂದಿದೆ.

ಅಣ್ಣ ಆಗಸ್ಟೀನ್ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಯುವಕನ ಮೃತದೇಹವನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಪೊಲೀಸರು ಹಸ್ತಾಂತರಿಸಿದರು.