ಮಡಿಕೇರಿ, ಜು. ೧೧: ಬೆಳ್ಳಂಬೆಳಿಗ್ಗೆ ರಬ್ಬರ್ ಟ್ಯಾಪಿಂಗ್ ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ವ್ಯಕ್ತಿಯೋರ್ವರ ಮೇಲೆ ಕಾಡಾನೆ ದಿಢೀರ್ ದಾಳಿ ನಡೆಸಲು ಯತ್ನಿಸಿದ್ದು, ವ್ಯಕ್ತಿ ತಪ್ಪಿಸಿಕೊಂಡು ಪವಾಡ ಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ಚೆಂಬು ಗ್ರಾಮದ ಊರುಬೈಲಿನಲ್ಲಿ ನಡೆದಿದೆ.

ಚೆಂಬು ಗ್ರಾಮದ ಊರುಬೈಲಿನ ಪಾಲ್ತಾಡು ರವಿ ಎಂಬವರು ಬೆಳಿಗ್ಗೆ ರಬ್ಬರ್ ಟ್ಯಾಪಿಂಗ್ ಮುಗಿಸಿ ಶೆಡ್‌ಗೆ ಬರುತ್ತಿದ್ದ ವೇಳೆ ಒಂಟಿ ಸಲಗವೊಂದು ಹಿಂಬದಿಯಿAದ ದಾಳಿಗೆ ಯತ್ನಿಸಿದ್ದು, ರವಿ ಅವರು ಓಡಿ ತಪ್ಪಿಸಿಕೊಂಡಿರುವುದಾಗಿ ತಿಳಿದು ಬಂದಿದೆ.

ರಬ್ಬರ್ ಕೆಲಸದ ಶೆಡ್ಡನ್ನು ಕಾಡಾನೆ ಸಂಪೂರ್ಣ ಹಾನಿ ಗೊಳಿಸಿದ್ದು, ಊರು ಬೈಲಿನಲ್ಲಿರುವ ಡಾ. ಯು.ಪಿ. ಶಿವಾನಂದ ಅವರ ತೋಟ, ವಾಸುದೇವ ಅರಂಬೂರು ಅವರ ತೋಟ ಸೇರಿದಂತೆ ಅಕ್ಕಪಕ್ಕದ ಕೃಷಿಕರ ತೋಟದಲ್ಲಿ ಅಪಾರ ಪ್ರಮಾಣದ ಕೃಷಿ ಹಾನಿಯಾಗಿದೆ.