ಮಡಿಕೇರಿ, ಜು. ೧೧: ಪಿಕಪ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ತುಂಬಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಗೋವುಗಳನ್ನು ರಕ್ಷಿಸಿದ ಘಟನೆ ಮಡಿಕೇರಿ ಗ್ರಾಮಾಂತರ ವ್ಯಾಪ್ತಿಯ ಪೆರಾಜೆಯಲ್ಲಿ ನಡೆದಿದೆ.

ಪೆರಾಜೆಯ ಕುಂಬಳಚೇರಿ-ಕುAದಲ್ಪಾಡಿ-ಕೂರ್ನಡ್ಕ ರಸ್ತೆಯ ಮೂಲಕ ಕೇರಳಕ್ಕೆ ಪಿಕಪ್ ವಾಹನವೊಂದರಲ್ಲಿ (ಕೆ.ಎ.೧೨ ಬಿ ೮೦೨೦) ೨ ಗೋವುಗಳನ್ನು ನಿನ್ನೆ ರಾತ್ರಿ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಜಾನುವಾರುಗಳನ್ನು ರಕ್ಷಿಸಿದ್ದಾರೆ. ರಾತ್ರಿ ಪೊಲೀಸರು ಪಿಕಪ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಗೋವುಗಳು ಇದ್ದುದರಿಂದ ಪೋಲಿಸರು ವಾಹನದ ಬಗ್ಗೆ ಹಾಗೂ ಗೋವು ಸಾಗಾಣಿಕೆ ಪರವಾನಗಿ ವಿಚಾರಿಸಿದಾಗ ಪರವಾನಗಿ ಹೊಂದಿಲ್ಲ, ವಾಹನದ ಮಾಲಿಕ ನಾನೇ ಆಗಿರುತ್ತೇನೆ, ಪೆರಾಜೆಯ ಸಚಿನ್ ಮತ್ತು ನಿತಿನ್ ದನ ಸಾಗಿಸಲು ಬಾಡಿಗೆಗೆ ಬರುವಂತೆ ತಿಳಿಸಿದ ಮೇರೆಗೆ ನಾನು ಅವರ ಮನೆಯ ಬಳಿಗೆ ಬಂದಿದ್ದು, ಅಲ್ಲಿಂದ ಮೂವರು ಸೇರಿ ಗೋವುಗಳನ್ನು ಈ ಪಿಕಪ್ ವಾಹನಕ್ಕೆ ತುಂಬಿಸಿಕೊAಡು ಕುಂಬಳಚೇರಿ- ಕೂರ್ನಡ್ಕ ಮಾರ್ಗವಾಗಿ ಕೇರಳ ರಾಜ್ಯಕ್ಕೆ ಕಡಿದು ಮಾಂಸ ಮಾಡುವ ಸಲುವಾಗಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಚಾಲಕ ವಿನೋದ್ ಪೊಲೀಸರ ಮುಂದೆ ತಿಳಿಸಿರುತ್ತಾನೆ.

ವಾಹನ ಹಾಗೂ ಚಾಲಕ ಕೇರಳದ ಕಲ್ಲಪಳ್ಳಿಯ ನಿವಾಸಿ, ಸುಳ್ಯದ ಕೇರ್ಪಳದಲ್ಲಿ ವಾಸವಿರುವ ವಿನೋದ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಗಾಡಿಯಲ್ಲಿದ್ದ ಸಚಿನ್ ಮತ್ತು ನಿತಿನ್ ಪರಾರಿಯಾಗಿದ್ದಾರೆ.

ಈ ಬಗ್ಗೆ ಮಡಿಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಕಾರ್ಯಾಚರಣೆಯಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆಯ ಸಿಬ್ಬಂದಿಗಳಾದ ರಾಜೇಶ್ ಕೆ., ನವೀನ್ ಕುಮಾರ್, ರವಿಕುಮಾರ್, ಬಸವರಾಜ್, ಪ್ರವೀಣ್ ಕುಮಾರ್ ಭಾಗವಹಿಸಿದ್ದರು.