ಕುಶಾಲನಗರ, ಜು. ೧೨: ಕುಶಾಲನಗರ ಲಯನ್ಸ್ ಕ್ಲಬ್‌ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಲ್ಲಿನ ಎ.ಪಿ.ಸಿ.ಸಿ.ಎಂ.ಎಸ್. ಸಭಾಂಗಣದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಡಾ. ಪ್ರವೀಣ್ ದೇವರಗುಂಡ ಸೋಮಪ್ಪ, ಕಾರ್ಯದರ್ಶಿಯಾಗಿ ನಿತಿನ್ ಗುಪ್ತ, ಖಜಾಂಚಿಯಾಗಿ ಎಂ.ಜಿ. ಕಿರಣ್ ಅಧಿಕಾರ ವಹಿಸಿಕೊಂಡರು. ಲಯನ್ಸ್ ಜಿಲ್ಲಾ ೩೧೭-ಡಿ ಉಪಾಧ್ಯಕ್ಷ ಕುಡ್ಪಿ ಅರವಿಂದ್ ಶೆಣೈ ಪದಗ್ರಹಣ ಕಾರ್ಯಕ್ರಮ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಸಾಮಾಜಿಕ ಸೇವಾ ಕಾರ್ಯಕ್ಕೆ ಹೆಸರುವಾಸಿಯಾದ ಲಯನ್ಸ್ ಕ್ಲಬ್ ಹಲವು ಸಮಾಜಮುಖಿ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ. ಸೇವಾ ಕಾರ್ಯಗಳು ಮನುಷ್ಯನಲ್ಲಿ ಸಂತಸ, ಆತ್ಮತೃಪ್ತಿ ಉಂಟುಮಾಡುತ್ತವೆ. ಜಗತ್ತನ್ನು ಬದಲಾಯಿಸಲು ಸಾಧ್ಯವಾಗದಿದ್ದರೂ ನಮ್ಮ ಸೇವೆಯಿಂದ ಸಮಾಜದಲ್ಲಿ ಸಣ್ಣ ಬದಲಾವಣೆ ತರಲು ಸಾಧ್ಯವಿದೆ. ಆದ್ದರಿಂದ ಲಯನ್ಸ್ ಸದಸ್ಯರು ಅಗತ್ಯವಿರುವರಿಗೆ ಸಹಾಯಹಸ್ತ ಚಾಚುವ ಮೂಲಕ ಅವರ ಜೀವನದಲ್ಲಿ ಬದಲಾವಣೆ ತರಲು ಸದಾ ಸಿದ್ಧವಿರಬೇಕಿದೆ ಎಂದರು.

ನೂತನ ಅಧ್ಯಕರಾಗಿ ಅಧಿಕಾರ ವಹಿಸಿಕೊಂಡ ಡಾ. ಪ್ರವೀಣ್ ಮಾತನಾಡಿ, ವಿನೂತನ ಕಾರ್ಯಕ್ರಮಗಳು, ಚಟುವಟಿಕೆಗಳ ಮೂಲಕ ಕುಶಾಲನಗರ ಲಯನ್ಸ್ ಕ್ಲಬ್ ಅನ್ನು ಮತ್ತಷ್ಟು ಯಶಸ್ವಿಯಾಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಕಳೆದ ಅವಧಿಯಲ್ಲಿ ಲಯನ್ಸ್ ಸಾಧನೆಗೆ ದೊರೆತ ವೈಯಕ್ತಿಕ ಪ್ರಶಸ್ತಿ ಹಾಗೂ ಬಹುಮಾನಗಳನ್ನು ಪದಾಧಿಕಾರಿಗಳಿಗೆ ಹಸ್ತಾಂತರ ಮಾಡಲಾಯಿತು. ನಿಕಟಪೂರ್ವ ಅಧ್ಯಕ್ಷ ಸುಮನ್ ಬಾಲಚಂದ್ರ ದಂಪತಿಯನ್ನು ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭ ವಲಯ ಮುಖ್ಯಸ್ಥೆ ಕನ್ನಿಕಾ ಅಯ್ಯಪ್ಪ, ವಲಯ ಮುಖ್ಯಸ್ಥರಾದ ಬೊಳ್ಳಪ್ಪ, ಮಹದೇವಪ್ಪ, ನಿಕಟಪೂರ್ವ ಅಧ್ಯಕ್ಷ ಸುಮನ್ ಬಾಲಚಂದ್ರ, ಕಾರ್ಯದರ್ಶಿ ಟಿ.ಕೆ. ರಾಜಶೇಖರ್, ಪ್ರಮುಖರಾದ ಕೊಡಗನ ಹರ್ಷ, ಎಂ.ಎಸ್. ಚಿಣ್ಣಪ್ಪ, ಸತೀಶ್ ಕುಮಾರ್, ಹೇಮಂತ್, ವಿವೇಕ್, ಡಾ. ರಾಘವೇಂದ್ರ ಮತ್ತಿತರರು ಇದ್ದರು.