ಕುಶಾಲನಗರ, ಜು. ೧೨: ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ೮ ಮಂದಿಗೆ ಅತ್ಯುತ್ತಮ ವರದಿಗಳಿಗೆ ಸಂಘದ ಸದಸ್ಯರುಗಳಿಗೆ ನೀಡಲಾಗುವ ವಾರ್ಷಿಕ ದತ್ತಿನಿಧಿ ಪ್ರಶಸ್ತಿಗಳು ಪ್ರಕಟವಾಗಿದ್ದು ಎಂಟು ಪ್ರಶಸ್ತಿಗಳಲ್ಲಿ ಮೂರು ‘ಶಕ್ತಿ'ಯ ಪಾಲಾಗಿದೆ.

ಸಂಘದ ಸದಸ್ಯರುಗಳಿಗೆ ಅತ್ಯುತ್ತಮ ವರದಿಗಳಿಗೆ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿ ಘೋಷಣೆಯಾಗಿದ್ದು, ಶಕ್ತಿ ಬಳಗದ ಎಂ.ಎನ್. ಚಂದ್ರಮೋಹನ್, ಕೆ.ಕೆ. ನಾಗರಾಜ ಶೆಟ್ಟಿ ಮತ್ತು ವನಿತಾ ಚಂದ್ರಮೋಹನ್ ಅವರುಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪತ್ರಕರ್ತೆ ವನಿತಾ ಚಂದ್ರಮೋಹನ್ ಅವರ ತಾಯಿ ಅಯಿನಮಂಡ ಲೀಲಾವತಿ ಗಣಪತಿ ಅವರು ತಮ್ಮ ಪತಿ ಅಯಿನಮಂಡ ಗಣಪತಿ ಅವರ ಸ್ಮರಣಾರ್ಥ ಅತ್ಯುತ್ತಮವಾದ ಶೈಕ್ಷಣಿಕ ವರದಿಗೆ ವಿಜಯ ಕರ್ನಾಟಕ ವರದಿಗಾರ ವಿನೋದ್ ಅವರು ವರದಿ ಮಾಡಿದ ‘ಕೊರತೆಯ ನಡುವೆಯೂ ಸಾಧನೆ' ಎಂಬ ವರದಿ ಆಯ್ಕೆಯಾಗಿದೆ.

ಪತ್ರಕರ್ತ ಎಂ.ಎನ್. ಚಂದ್ರಮೋಹನ್ ಅವರು ತಮ್ಮ ತಂದೆ, ತಾಯಿ ಎಂ. ನಾರಾಯಣ ಮತ್ತು ಎನ್. ಪದ್ಮಾವತಿ ದಂಪತಿಗಳ ಸ್ಮರಣಾರ್ಥ ಅತ್ಯುತ್ತಮ ತನಿಖಾ ವರದಿಗೆ ಚಂದ್ರಮೋಹನ್ ಅವರ ಮೂಲಕ ‘ಶಕ್ತಿ’ಯಲ್ಲಿ ಪ್ರಕಟಗೊಂಡ ‘ಶುಂಠಿ ಬೆಳೆಯಲು ೩೫ ಎಕರೆ ತೋಟದಲ್ಲಿ ಮರಗಳ ಮಾರಣಹೋಮ' ಸರಣಿ ತನಿಖಾ ವರದಿ ಆಯ್ಕೆಯಾಗಿದೆ.

ಮಾಜಿ ಸಚಿವರು ಎಂ.ಪಿ. ಅಪ್ಪಚ್ಚು ರಂಜನ್ ಅವರು ಸ್ಥಾಪಿಸಿದ ಅತ್ಯುತ್ತಮ ರಾಜಕೀಯ ವರದಿಗೆ ಆಂದೋಲನ ಪತ್ರಿಕೆಯ ವರದಿಗಾರ ಷÀಂಶುದ್ದೀನ್ ಅವರ ‘ಕಾಂಗ್ರೆಸ್‌ನಲ್ಲಿ ಮುಗಿಯದ ಅಧ್ಯಾಯ' ವರದಿಗೆ ಪ್ರಶಸ್ತಿ ಲಭಿಸಿದೆ. ಕುಶಾಲನಗರದ ಶಾರದಾ ಪತ್ತಿನ ಸಹಕಾರ ಸಂಘದ ವತಿಯಿಂದ ನೀಡಲಾಗುವ ಅತ್ಯುತ್ತಮ ಕೃಷಿ ಬಗ್ಗೆ ವರದಿಗೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ಕೆ.ಕೆ. ನಾಗರಾಜ ಶೆಟ್ಟಿ ಅವರ ‘ಬೆಳೆ ರಕ್ಷಣೆಗೆ ಅಟ್ಟಣಿಗೆಯ ಮೊರೆ ಹೋದ ಕೃಷಿಕರು' ವರದಿ ಆಯ್ಕೆಯಾಗಿದೆ.

ಪತ್ರಕರ್ತ ಟಿ.ಆರ್. ಪ್ರಭುದೇವ್ ಅವರ ತಂದೆ ಎನ್. ರಾಮಕೃಷ್ಣ ಮತ್ತು ತಾಯಿ ಕೆ.ಎಂ. ಸರಸಮ್ಮ ಅವರ ನೆನಪಿಗಾಗಿ ನೊಂದವರ ಪರವಾಗಿ ಪ್ರಕಟಗೊಂಡ ಅತ್ಯುತ್ತಮ ಮಾನವೀಯ ವರದಿಗೆ ಪ್ರಜಾವಾಣಿ ಪತ್ರಿಕೆಯಲ್ಲಿ ವರದಿಗಾರ ರಘು ಹೆಬ್ಬಾಲೆ ಅವರ ‘ನದಿ ಅಂಚಿನ ಜನರಿಗೆ ಮಳೆಗಾಲದಲ್ಲಿ ನಡುಕ' ವರದಿ ಪ್ರಶಸ್ತಿಗೆ ಭಾಜನವಾಗಿದೆ.

ಪತ್ರಕರ್ತ ಕೆ.ಬಿ. ಷಂಶುದ್ದೀನ್ ಅವರು ತಮ್ಮ ತಾಯಿ ಕೆ.ಕೆ. ಖತೀಜ ಅವರ ಸ್ಮರಣಾರ್ಥ ಅತ್ಯುತ್ತಮ ಕ್ರೀಡಾ ವರದಿಗೆ ವಾರ್ತಾಭಾರತಿಯಲ್ಲಿ ಪ್ರಕಟಗೊಂಡ ಇಸ್ಮಾಯಿಲ್ ಕಂಡಕೆರೆ ಅವರ ‘ಕೊಡಗಿನ ಕ್ರೀಡಾಕಲಿಗಳಿಗೆ ಕಾಡುತ್ತಿದೆ ದೈಹಿಕ ಶಿಕ್ಷಕರ ಕೊರತೆ' ಸುದ್ದಿ ಆಯ್ಕೆ ಆಗಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಮಳಲಗದ್ದೆ ನಳಂದ ಆಯುರ್ವೇದ ನ್ಯಾಸದ ಖ್ಯಾತ ಪಾರಂಪರಿಕ ವೈದ್ಯೆ ಸುಮನ ಮಳಲಗದ್ದೆ ಅವರು ಸ್ಥಾಪಿಸಿದ ಪಾರಂಪರಿಕ ನಾಟಿ ವೈದ್ಯ ವರದಿ ಪ್ರಶಸ್ತಿಗೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ವನಿತಾ ಚಂದ್ರಮೋಹನ್ ಅವರ ‘ಬಾಲಗ್ರಹ ಪೀಡೆಗೆ ರಾಮಬಾಣ ಕೊಡಗರಮ್ಮನ ನಾಟಿ ಮದ್ದು' ವಿಶೇಷ ವರದಿಗೆ ಆಯ್ಕೆ ಆಗಿದೆ. ಪತ್ರಕರ್ತ ಕುಡೆಕಲ್ ಗಣೇಶ್ ಅವರ ತಂದೆ ಕುಡೆಕಲ್ ಕೃಷ್ಣಪ್ಪ ಅವರ ಜ್ಞಾಪಕಾರ್ಥ ಸ್ಥಾಪಿತ ದೃಶ್ಯ ವಾಹಿನಿಯ ಸಾಮಾಜಿಕ ಕಳಕಳಿಯ ಚಿತ್ತಾರ ವಾಹಿನಿಯ ವರದಿಗಾರ ಹೆಚ್.ಜೆ. ಶಿವರಾಜ್ ಅವರ ‘ಓದುಗರ ಕೈಗೆಟುಕದ ಕುಶಾಲನಗರ ಗ್ರಂಥಾಲಯ' ಮಾಧ್ಯಮ ವರದಿಗೆ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಲಭಿಸಿದೆ.

ಎಂದು ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾ. ೨೦ ರಂದು ಕುಶಾಲನಗರದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.