ಮಡಿಕೇರಿ, ಜು. ೧೨: ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪಾನಮತ್ತ ಗೂಡ್ಸ್ ಆಟೋ ಚಾಲಕನೋರ್ವ ಕಾರಿಗೆ ಅಪಘಾತಗೊಳಿಸಿ ಪರಾರಿಯಾಗಲು ಯತ್ನಿಸಿದ ಸಂದರ್ಭ ಪೊಲೀಸರು ತಡೆದು ಬಂಧಿಸಿದ ಘಟನೆ ನಡೆದಿದೆ. ಕಾನೂರು ನಿವಾಸಿ ವಿವೇಕ್ ಎಂಬವರು ತಮ್ಮ ಪತ್ನಿ ಜೊತೆ ಟೊಯೋಟ ಇನ್ನೋವ ಕಾರಿನಲ್ಲಿ ಮಡಿಕೇರಿಗೆ ಮದುವೆಗೆಂದು ಆಗಮಿಸಿ ಹಿಂತಿರುಗುವ ಸಂದರ್ಭ ಸುಂಟಿಕೊಪ್ಪದ ರಫೀಕ್ ಎಂಬಾತ ಮರಗೆಣಸು ತುಂಬಿದ್ದ ಆಟೋವನ್ನು ಚಲಾಯಿಸಿಕೊಂಡು ಓವರ್ ಟೇಕ್ ಮಾಡಿಕೊಂಡು ಬಂದು ಐರಾವತ ಬಸ್‌ಗೆ ತಗುಲಿಸಿ ಸಂಚಾರ ದಟ್ಟಣೆಯಿದ್ದ ಹಿನ್ನೆಲೆ ನಿಲ್ಲಿಸಿದ್ದ ವಿವೇಕ್ ಅವರ ಕಾರಿನ ಮುಂಭಾಗದ ಬಂಪರ್‌ಗೆ ಗುದ್ದಿಕೊಂಡು ಆಟೋ ಚಾಲಕ ಪರಾರಿಯಾಗಲು ಯತ್ನಿಸಿದ್ದಾನೆ.

ಸ್ಥಳದಲ್ಲಿದ್ದ ಪೊಲೀಸರು ವಾಹನವನ್ನು ಅಡ್ಡಗಟ್ಟಿ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪಾನಮತ್ತನಾಗಿದ್ದ ಚಾಲಕ ಹೆಸರು ಹೇಳುವ ಸ್ಥಿತಿಯಲ್ಲಿಯೂ ಇರಲಿಲ್ಲ. ನಂತರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.