ಮಡಿಕೇರಿ, ಆ. ೨೮: ವೀರಾಜ ಪೇಟೆ ಮೊದಲ ವಾರ್ಡ್ನ ಮೂರ್ನಾಡು ರಸ್ತೆಯಿಂದ ಸಂತ ಅನ್ನಮ್ಮ ದೇವಾಲಯ ಮತ್ತು ಶಾಲೆಗೆ ತೆರಳುವ ಅಡ್ಡರಸ್ತೆಯಲ್ಲಿ ಸಣ್ಣ ಸೇತುವೆಯ ರಸ್ತೆಯ ಮಧ್ಯದಲ್ಲಿ ದೊಡ್ಡ ಗುಂಡಿಯಾಗಿದ್ದು ಜನರ ಮತ್ತು ವಾಹನಗಳ ಸಂಚಾರ ಬಂದ್ ಮಾಡಲಾಗಿದೆ. ರಸ್ತೆಯ ಎರಡು ಭಾಗದಲ್ಲಿ ಯಾವುದೇ ಎಚ್ಚರಿಕೆಯ ನಾಮಫಲಕಗಳನ್ನು ಅಳವಡಿಸಿಲ್ಲ. ಪುರಸಭೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿನ ಸಾರ್ವಜನಿಕರು ಮನವಿ ಮಾಡಿದರು. ಸೇತುವೆ ಮುರಿದು ಬಿದ್ದ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಚಂದ್ರ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ತಕ್ಷಣವೇ ಕ್ರಮ ಕೈಗೊಳ್ಳುತ್ತವೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಪುರಸಭೆಯ ಸಿಬ್ಬಂದಿಗಳಾದ ವೇಲು ಮುರುಗನ್, ಮುರುಳಿ ಹಾಜರಿದ್ದರು.