ಶ್ರೀಮಂಗಲ, ಆ. ೨೮: ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾದ ಕಾಫಿ ಬೆಳೆ ನಷ್ಟದ ಹಿನ್ನೆಲೆ ಬೆಂಗಳೂರು ಭಾರತೀಯ ಕಾಫಿ ಮಂಡಳಿ ಜಂಟಿ ನಿರ್ದೇಶಕ ಪಾರ್ಥ ಪ್ರಧಾನ್ ಚೌಧರಿ ಅವರು ದಕ್ಷಿಣ ಕೊಡಗಿನ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪೊನ್ನಂಪೇಟೆ ತಾಲೂಕಿನ ಹುದಿಕೇರಿ, ಕೋಣಗೇರಿ, ಬಿರುನಾಣಿ ಗ್ರಾ. ಪಂ. ವ್ಯಾಪ್ತಿಯ ಪೊರಾಡು ಗ್ರಾಮಗಳ ತೋಟಗಳಿಗೆ ಭೇಟಿ ನೀಡಿದರು. ಈ ಸಂದರ್ಭ ಸ್ಥಳೀಯ ಬೆಳೆಗಾರರು ಪ್ರಸಕ್ತ ವರ್ಷ ಬಿರುಗಾಳಿ ಸಹಿತ ಅತಿವೃಷ್ಟಿಗೆ ಕಾಫಿ ಬೆಳೆ, ಕೊಳೆ ರೋಗ ಹಾಗೂ ತೊಟ್ಟು ಕೊಳೆಯುವ ರೋಗದಿಂದ ಪೀಡಿತವಾಗಿ ಶೇ. ೭೦ರಷ್ಟು ಫಸಲು ನಷ್ಟವಾಗಿದೆ. ಇನ್ನೂ ಸಹ ಮಳೆ ಮುಂದುವರೆದಿದ್ದು, ನಷ್ಟ ಪ್ರಮಾಣ ಹೆಚ್ಚಾಗಲಿದೆ. ಕಾಫಿ ಮಂಡಳಿ ಕೊಳೆರೋಗ ನಿಯಂತ್ರಣಕ್ಕೆ ಔಷಧಿ ಸಿಂಪಡಣೆಗೆ ಸಲಹೆ ನೀಡಿದ್ದರೂ, ಔಷಧಿ ದುಬಾರಿ ಯಾಗಿದ್ದು, ಮಳೆ ಬಿಡುವು ನೀಡದೇ ಈ ಕಾರ್ಯ ನಡೆಸಲು ಸಾಧ್ಯ ವಾಗುವುದಿಲ್ಲ. ಕಾರ್ಮಿಕರ ಕೊರತೆ, ರಸಗೊಬ್ಬರ ದರ ಏರಿಕೆ, ಫಸಲು ಕುಂಠಿತ ಇದರಿಂದ ತೋಟ ನಿರ್ವಹಣೆ ದೊಡ್ಡ ಸವಾಲಾಗಿದೆ, ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಹೆಚ್ಚಿನ ಮಟ್ಟದ ಪರಿಹಾರವನ್ನು ನೀಡಲು ಸರಕಾರಕ್ಕೆ ವರದಿ ಸಲ್ಲಿಸಲು ಮನವಿ ಮಾಡಿದರು. ಕಳೆದ ೧೫ಕ್ಕೂ ಹೆಚ್ಚು ವರ್ಷಗಳಿಂದ ಕಾಫಿಗೆ ಎನ್.ಡಿ.ಆರ್.ಎಫ್ ಪರಿಹಾರ ಮೊತ್ತ ಪರಿಷ್ಕರಣೆ ಮಾಡಿಲ್ಲ. ಪ್ರತಿ ಎಕರೆಗೆ ೧ ಲಕ್ಷ ಪರಿಹಾರವನ್ನು ನೀಡಬೇಕೆಂದು ಬೆಳೆಗಾರರು ಮನವಿ ಮಾಡಿದರು.

ಪ್ರಸಕ್ತ ವರ್ಷ ಅಂತಾರಾಷ್ಟಿçÃಯ ಮಾರುಕಟ್ಟೆ ದರ ಏರಿಕೆಯಾಗಿದ್ದರೂ ಅದಕ್ಕೆ ಅನುಸಾರ ದರ ಬೆಳೆಗಾರರಿಗೆ ಸಿಗುತ್ತಿಲ್ಲ. ಸಣ್ಣ ಬೆಳೆಗಾರರು ಬ್ಯಾಂಕ್ ಸಾಲ ಪಾವತಿ, ತೋಟ ನಿರ್ವಹಣೆ ವೆಚ್ಚ ಭರಿಸಬೇಕಾದ ಹಿನ್ನೆಲೆ ಉತ್ತಮ ಮಾರುಕಟ್ಟೆ ದರ ಬರುವವರೆಗೆ ದಾಸ್ತಾನು ಇಟ್ಟುಕೊಳ್ಳಲು ಸಾಧ್ಯವಾಗದೆ ಮಾರ್ಚ್ ತಿಂಗಳಲ್ಲಿಯೇ ಮಾರಾಟ ಮಾಡುತ್ತಾರೆ. ಇತ್ತೀಚೆಗೆ ಮಾರುಕಟ್ಟೆ ದರ ಏರಿಕೆಯಾಗಿದ್ದರೂ ಅದು ಸಣ್ಣ ಬೆಳೆಗಾರರಿಗೆ ದಕ್ಕುತ್ತಿಲ್ಲ ಎಂದು ಬೆಳೆಗಾರರು ವಿವರಿಸಿದರು. ರಸಗೊಬ್ಬರ, ಕೊಳೆರೋಗದ ಔಷಧಿಗಳನ್ನು ಸಬ್ಸಿಡಿಯಡಿ ಕಾಫಿ ಬೆಳೆಗಾರರಿಗೆ ನೀಡಬೇಕು, ಕಾಫಿ ಬೆಳೆನಷ್ಟಕ್ಕೆ ವಿಮೆ ಸೌಲಭ್ಯ ವ್ಯಾಪ್ತಿಗೆ ತರಬೇಕೆಂದು ಮನವಿ ಮಾಡಿದರು.

ಬೆಳೆಗಾರರ ಅಹವಾಲು ಹಾಗೂ ವಸ್ತುಸ್ಥಿತಿ ಬಗ್ಗೆ ಕಾಫಿ ಮಂಡಳಿಯ ಉನ್ನತಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಈ ಸಂದರ್ಭ ಜಂಟಿ ನಿರ್ದೇಶಕರು ಭರವಸೆ ನೀಡಿದರು.

ಈ ಸಂದರ್ಭ ಸ್ಥಳೀಯ ಬೆಳೆಗಾರರೊಂದಿಗೆ ಭಾರತೀಯ ಕಾಫಿ ಮಂಡಳಿ ಗೋಣಿಕೊಪ್ಪ ವಿಭಾಗದ ಹಿರಿಯ ಸಂಪರ್ಕ ಅಧಿಕಾರಿ ಶ್ರೀರಮಣ ಹಾಗೂ ಶ್ರೀಮಂಗಲ ಕಿರಿಯ ಸಂಪರ್ಕ ಅಧಿಕಾರಿ ಸುನಿಲ್ ಕುಮಾರ್ ಹಾಜರಿದ್ದರು.