ಮಡಿಕೇರಿ, ಆ. ೩೦: ಯುನೈಟೆಡ್ ಕೊಡವ ಆರ್ಗನೈಜೇಶನ್ (ಯುಕೊ) ಸಂಘಟನೆಯ ನಿಯೋಗವು ಇಂದು ಮೈಸೂರಿನಲ್ಲಿ ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಟದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿಮಾಡಿ ಕೊಡವರನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸುವಂತೆ ಮನವಿ ಸಲ್ಲಿಸಿ ಚರ್ಚೆ ನಡೆಸಿತು.

ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನೇತೃತ್ವದಲ್ಲಿ ನಗರದ ಕಾಡ ಕಛೇರಿ ಆವರಣದಲ್ಲಿರುವ ಸಂಸದರ ಕಛೇರಿಯಲ್ಲಿ ಭೇಟಿ ಮಾಡಿ ಚರ್ಚಿಸಿದ ನಿಯೋಗವು, ಕೊಡವ ಜನಾಂಗವು ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರವರ್ಗ ೩ ಎ ಅಡಿಯಲ್ಲಿ ವರ್ಗೀಕರಣ ಗೊಂಡು ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿಗೆ ಭಾಜನರಾಗಿರುತ್ತಾರೆ. ಆದರೆ, ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೊಡವರನ್ನು ಕೈಬಿಡಲಾಗಿದ್ದು, ಇದರಿಂದಾಗಿ ಕೇಂದ್ರ ಸರ್ಕಾರದ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿಯಲ್ಲಿ ಕೊಡವರಿಗೆ ಅನ್ಯಾಯವಾಗುತ್ತಿದೆ. ಈ ನಿಟ್ಟಿನಲ್ಲಿ ಕೊಡವರನ್ನು ಹಿಂದುಳಿದ ವರ್ಗಗಳ ಕೇಂದ್ರದ ಪಟ್ಟಿಗೆ ಸೇರ್ಪಡೆಗೊಳಿಸುವ ಕುರಿತಂತೆ ಸಂಸದರಿಗೆ ಮನವರಿಕೆ ಮಾಡಿಕೊಡಲಾಯಿತು.

ಹಾಗೆಯೇ ಕೇಂದ್ರ ಸರ್ಕಾರವು ಯು.ಜಿ.ಸಿ ಸಹಯೋಗದಲ್ಲಿ, ಅಳಿವಿ ನಂಚಿನಲ್ಲಿರುವ

(ಮೊದಲ ಪುಟದಿಂದ) ಭಾಷೆಗಳ ಅಭಿವೃದ್ಧಿ ನಿಟ್ಟಿನಲ್ಲಿ, ದಾಖಲೀಕರಣ, ಅಧ್ಯಯನ ಹಾಗೂ ಸಂರಕ್ಷಣೆಯ ಧ್ಯೇಯದೊಂದಿಗೆ ಪ್ರಾರಂಭಿಸಿರುವ ಎಸ್.ಪಿ.ಪಿ.ಪಿ.ಇ.ಎಲ್ ಹಾಗೂ ಅಸ್ಮಿತ ಎಂಬ ಎರಡು ಯೋಜನೆಗೆ ಯುನೆಸ್ಕೋ ವರದಿಯ ಆಧಾರದಲ್ಲಿ ಅಳಿವಿನಂಚಿನಲ್ಲಿರುವ ಕೊಡವ ಜನಾಂಗವು ಅರ್ಹತೆಯನ್ನು ಹೊಂದಿದ್ದು, ಈ ಯೋಜನೆಗೆ ಕೊಡವ ಭಾಷೆಯನ್ನು ಪರಿಗಣಿಸುವಂತೆಯೂ ಸಂಸದರೊAದಿಗೆ ಚರ್ಚಿಸಲಾಯಿತು.

ಮನವಿ ಸ್ವೀಕರಿಸಿ, ಪೂರಕವಾಗಿ ಸ್ಪಂದಿಸಿ ಮಾತನಾಡಿದ ಸಂಸದರು ಮನವಿಯಲ್ಲಿನ ಅಂಶಗಳನ್ನು ಪರಿಗಣಿಸಿ, ಪರಿಶೀಲಿಸಿ ಸೂಕ್ತವಾದ ಪ್ರಕ್ರಿಯೆಗಳ ಮೂಲಕ ಮನವಿಯಲ್ಲಿನ ಅಂಶಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಮುಂದಿನ ದಿನಗಳಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿಯೂ ತಿಳಿಸಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಕೊಡಗು ಮೈಸೂರು ಕ್ಷೇತ್ರದ ಮಾಜಿ ಸಂಸದ ಹಾಗೂ ಹಾಲಿ ಎಂ.ಎಲ್.ಸಿ ಅಡಗೂರು ಎಚ್. ವಿಶ್ವನಾಥ್ ಮಾತನಾಡಿ, ಕೊಡವರ ಐತಿಹಾಸಿಕ ಹಿನೆÀ್ನಲೆ, ದೇಶಕ್ಕೆ ಕೊಡವರ ಕೊಡುಗೆ ಹಾಗೂ ಕೊಡವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಸಂಸದರಿಗೆ ಮನವರಿಕೆ ಮಾಡಿದರು.

ನಿಯೋಗದಲ್ಲಿ ಚೆಪ್ಪುಡಿರ ಸುಜು ಕರುಂಬಯ್ಯ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ನೆಲ್ಲಮಕ್ಕಡ ಜೆಫ್ರಿ ಮಾದಯ್ಯ, ಅಜ್ಜಿನಿಕಂಡ ಸೂರಜ್ ತಿಮ್ಮಯ್ಯ, ಮಚ್ಚಾಮಾಡ ಅರುಣ ಸೋಮಯ್ಯ, ರಮೇಶ್, ಬೊಳಿಯಂಗಡ ಬೋಪಣ್ಣ, ಪುದಿಯೊಕ್ಕಡ ದಿನೇಶ್, ತೀತಿಮಾಡ ಬೋಸ್ ಅಯ್ಯಪ್ಪ, ಪೊಂಜAಡ ಗಿರಿ, ಚಿರಿಯಪಂಡ ವಿಶು ಕಾಳಪ್ಪ, ಚೆಪ್ಪುಡಿರ ಪ್ರತಿಮಾ ಕರುಂಬಯ್ಯ, ಕಳ್ಳಿಚಂಡ ದೀನ ಉತ್ತಪ್ಪ, ಬೊಳ್ಳಚೆಟ್ಟಿರ ಮೈನಾ ಕಾಳಪ್ಪ, ಕೊಕ್ಕಲೆಮಾಡ ರತಿ ಕುಶಾಲಪ್ಪ, ಇದ್ದರು.