ಕುಶಾಲನಗರ, ಆ. ೩೦: ಮನುಕುಲದ ಒಳಿತಿಗೆ ವಚನ ಸಾಹಿತ್ಯದ ಮಹತ್ವ ಹಾಗೂ ಜಾಗೃತಿಯನ್ನು ಮೂಡಿಸುತ್ತಿರುವ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನವಾಗಿ ಸುತ್ತೂರು ಮಹಾಸಂಸ್ಥಾನದ ೨೩ ನೇ ಜಗದ್ಗುರು ಡಾ.ರಾಜೇಂದ್ರ ಸ್ವಾಮೀಜಿ ಜನ್ಮದಿನಾಚರಣೆಯನ್ನು ಆಚರಿಸುತ್ತಿರುವುದರಿಂದ ಇದು ಸರ್ಕಾರವೇ ಆಚರಿಸುವಂತಾಗ ಬೇಕೆಂದು ಜಿ.ಪಂ. ಮಾಜಿ ಸದಸ್ಯ ವಿ.ಪಿ.ಶಶಿಧರ್ ಆಗ್ರಹಿಸಿದರು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸುತ್ತೂರು ಮಠದ ೨೩ ನೇ ಜಗದ್ಗುರು ಡಾ.ರಾಜೇಂದ್ರ ಸ್ವಾಮೀಜಿಯವರ ೧೦೯ನೇ ಪುಣ್ಯಸ್ಮರಣೆ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಜನಸಾಮಾನ್ಯರ ಬದುಕು ಸಂಕೀರ್ಣವಾಗಿದ್ದAತಹ ಕಾಲಘಟ್ಟದಲ್ಲಿ ಹೊರ ಬಂದAತಹ ವಚನಗಳು ಹಾಗೂ ಹನ್ನೆರಡನೇ ಶತಮಾನದ ಶರಣರ ಚಿಂತನೆಗಳು ಮನುಷ್ಯರ ಉತ್ತಮ ಬದುಕಿಗೆ ಸಿಕ್ಕಂತಹ ಮುತ್ತು ರತ್ನಗಳು. ಮೂಢನಂಬಿಕೆ, ಕಂದಾಚಾರ, ಬಡವ - ಬಲ್ಲಿದ, ಮೇಲು - ಕೀಳು ಬೇಧಗಳು ಜನಸಾಮಾನ್ಯರ ಜೀವ ಹಿಂಡುತ್ತಿದ್ದ ಕಾಲದಲ್ಲಿ ಬಸವಾದಿ ಶರಣರ ವಚನಗಳು ಮನುಷ್ಯನಿಗೆ ಲೌಕಿಕ ಜೀವನ ದರ್ಶನಗೈದ ಮಾಣಿಕ್ಯಗಳು ಎಂದು ಶಶಿಧರ್ ಬಣ್ಣಿಸಿದರು.

ಪ್ರತಿಯೊಬ್ಬರು ವಚನಗಳನ್ನು ಓದಿ ಅರ್ಥೈಸಿಕೊಂಡರೆ ಸಮಾಜದಲ್ಲಿ ಉದ್ವಿಘ್ನತೆ ಹಾಗೂ ಪ್ರಕ್ಷುಬ್ಧತೆಯ ವಾತಾವರಣವೇ ಘಟಿಸುವುದಿಲ್ಲ. ನಾಡು ಕಂಡAತಹ ಶ್ರೇಷ್ಠ ಚಿಂತಕ ಡಾ.ಕಲ್ಬುರ್ಗಿಯವರ ವಚನ ಸಾಹಿತ್ಯ ಸಂಶೋಧನೆಯ ಪುಸ್ತಕಗಳು ಹೊರಬಂದಿದ್ದರೆ ವಚನ ಸಾಹಿತ್ಯದ ಹೊಳಪು ಮತ್ತಷ್ಟು ಹೆಚ್ಚುತ್ತಿತ್ತು ಎಂದರು. ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಮನುಷ್ಯನ ಆಯುಷ್ಯದ ಬಹುತೇಕ ಸಮಯ ನಿದ್ದೆಯಲ್ಲಿಯೇ ಕಳೆಯುತ್ತದೆ.

ಆದರೆ ಉಳಿವ ಅಲ್ಪ ಅವಧಿಯನ್ನು ಶರಣರ ತತ್ವಗಳು ಹಾಗೂ ಸಮಾಜಮುಖಿ ಚಿಂತನೆಗಳಿಗೆ ಬಳಸುವ ಮೂಲಕ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಸುತ್ತೂರು ಮಠದ ೨೩ ನೇ ಜಗದ್ಗುರು ಡಾ.ರಾಜೇಂದ್ರ ಸ್ವಾಮೀಜಿಯವರ ಅನ್ನ, ಅರಿವು, ಆರೋಗ್ಯ ಎಂಬ ತ್ರಿವಿಧ ದಾಸೋಹದ ಫಲವಾಗಿ ಇಡೀ ನಾಡು ಸಾಕಷ್ಟು ಸುಶಿಕ್ಷಿತವಾಗಿದೆ ಎಂದರು.

ಡಾ.ರಾಜೇAದ್ರ ಶ್ರೀಗಳ ಜೀವನ ದರ್ಶನದ ಕುರಿತು ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ ಹಾಗೂ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಪ್ರಕಾಶ್ ಮಾತನಾಡಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಷಾಧಿಕಾರಿ ಪರಮೇಶ್, ಕುಶಾಲನಗರ ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ಹೇಮಲತಾ ವಿರೂಪಾಕ್ಷ, ಮಾಜಿ ಅಧ್ಯಕ್ಷೆ ಲೇಖನಾ ಧರ್ಮೇಂದ್ರ ಇದ್ದರು.

ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತಾ ಶಿಕ್ಷಕ ಪುಟ್ಟರಾಜು ಅಲ್ಲಮಪ್ರಭುಗಳ ವಚನಗಳನ್ನು ಹಾಡಿದರು. ಇದೇ ಸಂದರ್ಭ ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅವರನ್ನು ಪರಿಷತ್ತು ವತಿಯಿಂದ ಗೌರವಿಸಲಾಯಿತು.