ಸೋಮವಾರಪೇಟೆ,ಆ.೩೦: ನೇಣು ಬಿಗಿದುಕೊಂಡು ಆಟೋ ಚಾಲಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣ ಸಮೀಪದ ಕೆಂಚಮ್ಮನ ಬಾಣೆಯಲ್ಲಿ ನಡೆದಿದೆ.

ಕೆಂಚಮ್ಮನಬಾಣೆ ನಿವಾಸಿ ಶೋಭಾ ಹಾಗೂ ದಿ. ಚಿನ್ನಪ್ಪ ಅವರ ಪುತ್ರ, ಪಟ್ಟಣದಲ್ಲಿ ಆಟೋ ಚಾಲಕನಾಗಿದ್ದ ಯಶ್ವಂತ್ (೩೦) ಎಂಬಾತನೇ ಆತ್ಮಹತ್ಯೆಗೆ ಶರಣಾದವನು.

ತಾಯಿ ಶೋಭಾ ಅವರು ಬೆಂಗಳೂರಿನಲ್ಲಿರುವ ಮಗಳ ಮನೆಗೆ ತೆರಳಿದ್ದು, ಮನೆಯಲ್ಲಿ ಓರ್ವನೇ ಇದ್ದ ಯಶ್ವಂತ್ ನೇಣು ಬಿಗಿದುಕೊಂಡು ಇಹಲೋಕ ತ್ಯಜಿಸಿದ್ದಾನೆ. ನೆರೆಕರೆಯವರು ಇಂದು ಮನೆಗೆ ತೆರಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಅವಿವಾಹಿತನಾಗಿದ್ದ ಯಶ್ವಂತ್, ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಬಿಡುವಿನ ವೇಳೆಯಲ್ಲಿ ಟಿಂಬರ್ ಕೆಲಸಕ್ಕೆ ತೆರಳುತ್ತಿದ್ದನು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಈ ಬಗ್ಗೆ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.